ಸಾರಾಂಶ
ಹಾವೇರಿ: ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಅವಾಚ್ಯ ಹಾಗೂ ಅವಹೇಳನಕಾರಿ ಮಾತುಗಳನ್ನು ಆಡಿರುವ ಸಚಿವ ಜಮೀರ್ ಅಹ್ಮದ್ಖಾನ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಹಾಗೂ ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ತಕ್ಷಣವೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಅವರು ಮಾರಕವಾಗುವ ಸಾಧ್ಯತೆ ಇದ್ದು, ಕೋಮು ಗಲಭೆ, ಗಲಾಟೆಗಳಾದರೆ ಅದಕ್ಕೆ ಸಚಿವ ಜಮೀರ್ ಅಹ್ಮದ್ ಅವರೇ ಕಾರಣಿಭೂತರಾಗಲಿದ್ದಾರೆ. ಈಗಾಗಲೇ ವಕ್ಫ್ ಆಸ್ತಿ ವಿಚಾರವಾಗಿ ರಾಜ್ಯದಲ್ಲಿ ಗೊಂದಲ ಉಂಟಾಗಿದ್ದು, ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ್, ಚಂದ್ರಗೌಡ ಭರಮಗೌಡ್ರ, ರಮೇಶ್ ಮಾಕನೂರು, ವಿಠ್ಠಲ್ ಸುಣಗಾರ, ಸಿದ್ದಪ್ಪ ಗುಡಿಮುಂದ್ಲರ, ಶಿವಾನಂದ ಕೆಂಪಹಾಲಪ್ಪನವರ, ನಿಂಗಪ್ಪ ಸಣ್ಣಕೊಟ್ಟರಪ್ಪನವರ, ಮಾಲತೇಶ ಬಡಿಗೇರ, ಸುರೇಶ ಬುರಡಿಕಟ್ಟಿ, ಬೋದಪ್ಪ ಮಾಕನೂರ, ಗದಗಯ್ಯ ಹಿರೇಮಠ, ಸೋಮರೆಡ್ಡಿ ಹಾದಿಮನಿ, ಈರಣ್ಣ ನವಲಗುಂದ, ಬಿ.ಸಿ. ಗುದ್ಲಿಶೆಟ್ರು, ಮೋದಿನಸಾಬ್ ಹಣಗಿ ಸೇರಿದಂತೆ ಇತರರು ಇದ್ದರು.