ಹೋರಿ ಹಬ್ಬ ಆಚರಣೆಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯ

| Published : Nov 10 2025, 03:00 AM IST

ಸಾರಾಂಶ

ಜಾನಪದ ಹೋರಿ ಹಬ್ಬವನ್ನು ಅನಗತ್ಯ ಕಾನೂನುಗಳನ್ನು ಹೇರಿ ತಡೆಯಲು ಮುಂದಾಗುವುದು ಒಳ್ಳೆಯ ಕ್ರಮವಲ್ಲ, ಅನಗತ್ಯ ನಿಯಮಗಳನ್ನು ತೆಗೆದು ಹಾಕಿ ಹಬ್ಬ ಆಚರಣೆಗೆ ಅನುಕೂಲ ಮಾಡಿ ಕೊಡಿ ಎಂದು ನಮ್ಮೂರು ನಮ್ಮವರು ಹೋರಾಟದ ರೂವಾರಿ, ಹೈಕೋರ್ಟ್‌ ವಕೀಲ ಸಂದೀಪ ಪಾಟೀಲ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಹಾನಗಲ್ಲ: ಜಾನಪದ ಹೋರಿ ಹಬ್ಬವನ್ನು ಅನಗತ್ಯ ಕಾನೂನುಗಳನ್ನು ಹೇರಿ ತಡೆಯಲು ಮುಂದಾಗುವುದು ಒಳ್ಳೆಯ ಕ್ರಮವಲ್ಲ, ಅನಗತ್ಯ ನಿಯಮಗಳನ್ನು ತೆಗೆದು ಹಾಕಿ ಹಬ್ಬ ಆಚರಣೆಗೆ ಅನುಕೂಲ ಮಾಡಿ ಕೊಡಿ ಎಂದು ನಮ್ಮೂರು ನಮ್ಮವರು ಹೋರಾಟದ ರೂವಾರಿ, ಹೈಕೋರ್ಟ್‌ ವಕೀಲ ಸಂದೀಪ ಪಾಟೀಲ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋರಿ ಹಬ್ಬ ಉತ್ತರ ಕರ್ನಾಟಕದ ವಿಶೇಷ ಹಬ್ಬ. ಇದು ಕೃಷಿ ಸಮುದಾಯದ ಸಾಂಪ್ರದಾಯಿಕ ಹಾಗೂ ಸಂಭ್ರಮದ ಹಬ್ಬ. ಇದು ಇಂದಿನದಲ್ಲ. ಅನಾದಿ ಕಾಲದ್ದು. ಆದರೆ ಈ ಹಬ್ಬದ ಆಚರಣೆಯನ್ನು ತಡೆಯಲು ಕಾನೂನಿನ ತೊಡಕುಗಳನ್ನು ಹಾಕಿ ಹಬ್ಬದ ನಡೆಗೆ ಹಿನ್ನಡೆ ಮಾಡುವುದು ಬೇಡ. ಸರ್ಕಾರದ ಸುತ್ತೋಲೆಗಳು ಹೋರಾಟವನ್ನು ಹತ್ತಿಕ್ಕುವ ಹಾಗೂ ಹಬ್ಬವನ್ನು ನಿಲ್ಲಿಸುವ ಸಂದೇಶಗಳನ್ನು ಹೊಂದಿವೆ ಎಂದರು. ಕಂಬಳ ಹಾಗೂ ಜಲ್ಲೀಕಟ್ಟು ಹಬ್ಬಗಳಿಗೆ, ಸ್ಪರ್ಧೆಗಳಿಗೆ ಸರ್ಕಾರವೇ ಅನುದಾನ ನೀಡಿ, ವಿಮೆ ಸೌಲಭ್ಯ ನೀಡಿ ಬೆಂಬಲಿಸುವಾಗ, ಉತ್ತರ ಕರ್ನಾಟಕದ ಹೋರಿ ಹಬ್ಬಕ್ಕೆ ಸರ್ಕಾರದ ಈ ನೀತಿ ಏಕಿಲ್ಲ. ಇದು ಹೋರಿ ಹಬ್ಬದ ಅಭಿಮಾನಿಗಳು ಹಾಗೂ ಕೃಷಿಕ ಸಮಾಜವನ್ನು ನಿರಾಸೆಗೊಳಿಸುವ ಆದೇಶವಾಗಿದೆ. ಹೀಗಾಗಿ ಸುತ್ತೋಲೆ ಮಾರ್ಪಾಡು ಆಗಬೇಕು. ಇದರೊಂದಿಗೆ ಗೋರಕ್ಷಣೆಯ ಹೊಣೆಯನ್ನೂ ಕೂಡ ಸರ್ಕಾರವೇ ವಹಿಸಬೇಕು. ಗೋರಕ್ಷಣೆಗೆ ಅನುಕೂಲಕರವಾದ ಸರ್ಕಾರದ ಆದೇಶಗಳು ಬಂದು ಅವು ಕಾರ್ಯ ರೂಪಕ್ಕೆ ಬರಬೇಕು ಎಂದರು. ಸಾಂಪ್ರದಾಯಿಕ ಹೋರಿ ಹಬ್ಬದ ಹಿನ್ನಡೆಗೆ ಕಾರಣವಾಗುವ ನಿಯಮಗಳನ್ನು ತೆಗೆದು ಹಾಕಿ. ಹೋರಿ ಹಬ್ಬದ ಹೆಸರಿನಲ್ಲಿ ಸ್ಪರ್ಧೆಗಳು ನಡೆದು, ಹೋರಿ ಹಬ್ಬದ ಮೂಲಕ ಹಣ ಮಾಡಲು ಮುಂದಾಗಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ. ಹಬ್ಬದ ಆಚರಣೆಗೆ ಇದು ತೊಡಕಾಗಬಾರದು ಎಂದರು. ಹೋರಿ ಹಬ್ಬ ಪರಿಶೀಲಿಸುವ ಸಮಿತಿ ಹಬ್ಬವನ್ನು ನಿಲ್ಲಿಸಲು ಬೇಕಾಗುವ ಒತ್ತಡ ಹಾಕುವುದು ಬೇಡ. ಹೋರಿ ಹಬ್ಬದ ಆಯೋಜಕರು ಹೋರಿಯ ದೇಹ ಸ್ಥಿತಿಯನ್ನು ವೈದ್ಯರಿಂದ ಪ್ರಮಾಣಿಕರಿಸುವ ಪ್ರಮಾಣ ಪತ್ರ ತರುವುದಲ್ಲ. ಅದು ಹೋರಿ ಓಡಿಸುವವರು ಮಾಡುವ ಕೆಲಸ. ಹೋರಿ ಬಿಡುವವರಿಂದ ತೊಂದರೆ ಆದರೆ ಅದು ಬಿಡುವವರ ಜವಾಬ್ದಾರಿ. ಅದಕ್ಕೆ ಆಯೋಜಕರನ್ನು ಹೊಣೆ ಮಾಡುವುದು ಬೇಡ. ಹೋರಿ ಹಬ್ಬದ ಚಿತ್ರೀಕರಣ ಸರ್ಕಾರ ಇಲಾಖೆಗಳು ಮಾಡಬೇಕಾದ ಕೆಲಸವೇ ಹೊರತು ಆಯೋಜಕರ ಜವಾಬ್ದಾರಿ ಅಲ್ಲ. ಈ ಕುರಿತ ಸುತ್ತೋಲೆಗಳನ್ನು ಮರು ಪರಿಶೀಲಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಉತ್ತರ ಕರ್ನಾಟಕದ ಈ ಹಬ್ಬಕ್ಕೆ ಅಡಚಣೆ ಮಾಡುವ ಬದಲು ಹಬ್ಬದ ಆಚರಣೆಗೆ ಬೇಕಾಗುವ ಅನುಕೂಲ ಸರ್ಕಾರ ಮಾಡಿ ಕೊಡಬೇಕು. ಅಲ್ಲದೆ ಕಂಬಳ ಜಿಲ್ಲಿಕಟ್ಟು ಸ್ಪರ್ಧೆಗಳಿಗೆ ಕೋಡು ಸೌಲಭ್ಯ, ಅನುದಾನ, ವಿಮೆ ಸೌಲಭ್ಯವನ್ನು ಸರ್ಕಾರ ಹೋರಿ ಹಬ್ಬಕ್ಕೂ ಕೊಡಬೇಕು. ಈ ಕುರಿತು ಶುಕ್ರವಾರ ಹಾವೇರಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ನಮ್ಮ ಅಹವಾಲು ತಲುಪಿಸಲು ಮನವಿಯನ್ನೂ ಮಾಡಲಾಗಿದೆ ಎಂದು ಸಂದೀಪ ಪಾಟೀಲ ಒತ್ತಾಯಿಸಿದರು.