ಪುರಭವನ ಪೂರ್ಣಗೊಳಿಸಲು ಶೀಘ್ರ ಕ್ರಮ

| Published : Jan 04 2025, 12:30 AM IST

ಸಾರಾಂಶ

ಪ್ರಗತಿ ಹಂತದಲ್ಲಿರುವ ಪುರಭವನ ನಿರ್ಮಾಣಕ್ಕೆ ಪುರಸಭೆಯಿಂದಲೇ ₹೩ ಕೋಟಿ ವಿನಿಯೋಗಿಸಿ ಈ ಅವಧಿಯಲ್ಲೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಒಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಕಳೆದ ಸಭೆಯಲ್ಲಿ ಪ್ರತಿ ವಾರ್ಡ್‌ಗೆ ನಿಗದಿಯಾಗಿದ್ದ ಕಾಮಗಾರಿಗಳಿಗೆ ಇನ್ನು ೧೫ ದಿನದಲ್ಲಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೀದಿ ದೀಪಗಳ ಕೊರತೆ ಇದೆಯೋ ಅಲ್ಲಿ ಹೊಸ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರಗತಿ ಹಂತದಲ್ಲಿರುವ ಪುರಭವನ ನಿರ್ಮಾಣಕ್ಕೆ ಪುರಸಭೆಯಿಂದಲೇ ₹೩ ಕೋಟಿ ವಿನಿಯೋಗಿಸಿ ಈ ಅವಧಿಯಲ್ಲೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಒಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಕಳೆದ ಸಭೆಯಲ್ಲಿ ಪ್ರತಿ ವಾರ್ಡ್‌ಗೆ ನಿಗದಿಯಾಗಿದ್ದ ಕಾಮಗಾರಿಗಳಿಗೆ ಇನ್ನು ೧೫ ದಿನದಲ್ಲಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭೆಯಿಂದ ಪೊಲೀಸ್ ಇಲಾಖೆಗೆ ಜೀಪ್ ಕೊಡಿಸಲಾಗುವುದು. ಇದರಿಂದ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಗೆ ಪೂರಕ ನೆರವು ದೊರೆತಂತಾಗುತ್ತದೆ. ನವೋದಯ ಶಾಲೆಯ ಹಿಂಭಾಗದ ರಸ್ತೆಗೆ ಒಂದು ಕೋಟಿ ರು. ಅನುದಾನ ನಿಗದಿಯಾಗಿದ್ದು, ತಗ್ಯಮ್ಮನ ಬಡಾವಣೆ ತನಕ ಈ ರಸ್ತೆ ಮಾಡಲಾಗುವುದು. ವಾರ್ಡ್ ನಂ.೧ರಲ್ಲಿ ಸರ್ವೆ ನಂ. ೨೭/೮ ರಲ್ಲಿ ೩೮ ಗುಂಟೆ ಜಾಗ ಇದ್ದು ಇದರಲ್ಲಿ ೧೨ ಗುಂಟೆಯನ್ನು ಸಾಗುವಳಿ ಮಾಡಲಾಗಿದೆ. ಉಳಿದ ೨೬ ಗುಂಟೆಯಲ್ಲಿ ಬಂಡೆ ಆವರಿಸಿಕೊಂಡಿದ್ದು, ಇದನ್ನು ಉದ್ಯಾನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ವಿಭಾಗೀಯ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಬೇಕು ಎಂದು ಸಲಹೆ ನೀಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೀದಿ ದೀಪಗಳ ಕೊರತೆ ಇದೆಯೋ ಅಲ್ಲಿ ಹೊಸ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಸದಸ್ಯರು ಈ ಸಂಬಂಧ ಸ್ಪಯಂ ಮಾಹಿತಿ ನೀಡಬೇಕು. ಮೈಸೂರು ರಸ್ತೆಯಲ್ಲಿ ನಿರಂತರವಾಗಿ ನೀರು ಸೋರಿಕೆಯಿಂದ ರಸ್ತೆ ಹಾಳಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ಅಲ್ಪಸಂಖ್ಯಾತ ಇಲಾಖೆಯಿಂದ ವಿಶೇಷ ಅನುದಾನ ತಂದು ಅಗತ್ಯ ಮಳಿಗೆಗಳಿಂದ ಬಾಡಿಗೆ ಸರಿಯಾಗಿ ಸಂದಾಯವಾಗದಿದ್ದರೆ, ವಸೂಲಿ ಮಾಡಿ ಸಿಬ್ಬಂದಿ ಪಾವತಿ ಮಾಡದಿದ್ದರೆ ಗಮನಕ್ಕೆ ತನ್ನಿ. ತಪ್ಪುಗಳಾಗಿದ್ದರೆ ಸರಿಪಡಿಸೋಣ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸಲಹೆ ನೀಡಿದರು.

ಸದಸ್ಯ ಪ್ರಕಾಶ್ ಮಾತನಾಡಿ, ಪುರಸಭೆ ಮಳಿಗೆಗಳ ವಿಚಾರದಲ್ಲಿ ಹಗರಣ ನಡೆದಿದೆ. ಎಲ್ಲ ಮಳಿಗೆಗಳ ಹಂಚಿಕೆಯ ಕ್ರಮಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸಿ ಪಾರದರ್ಶಕ ತನಿಖೆ ನಡೆಸಬೇಕು.ಕಾಂಗ್ರೆಸ್ ಸದಸ್ಯರುಗಳ ವಾರ್ಡುಗಳಲ್ಲಿ ಅಭಿವೃದ್ಧಿಮಾಡದೆ ಹೆಚ್ಚು ತಾರತಮ್ಯ ನಡೆಯುತ್ತಿದೆ ಎಂದರು.ನೂತನ ನಾಮನಿರ್ದೇಶಿತ ಸದಸ್ಯರಾದ ಇಮ್ರಾನ್‌ಪಾಷ ಹಾಗೂ ತೀರ್ಥಕುಮಾರ್ ಅವರನ್ನು ಸ್ವಾಗತಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಪೌರಕಾರ್ಮಿಕ ಭಾಸ್ಕರ್‌ರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪುರಸಭಾಧ್ಯಕ್ಷೆ ಕೆ. ಎನ್. ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ ಸ್ಥಾಯಿಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್ ಇದ್ದರು.