ಮೊಬೈಲ್ ಫೋನ್ಗಳನ್ನು ಕೇವಲ ಸಾಮಾಜಿಕ ಜಾಲತಾಣ ಅಥವಾ ಮನರಂಜನೆಗಾಗಿ ಬಳಸದೇ, ಜ್ಞಾನಾರ್ಜನೆ, ಭಾಷಾ ಕೌಶಲ್ಯ ವೃದ್ಧಿಗಾಗಿ, ಸಂವಹನ ಕಲೆ ಹಾಗೂ ದೇಶ-ವಿದೇಶಗಳ ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
- ಬಳ್ಳಾರಿ-ಹರಪನಹಳ್ಳಿ-ದಾವಣಗೆರೆ-ಯಶವಂತಪುರ ಇಂಟರ್ಸಿಟಿ ರೈಲಿಗೆ ಪ್ರಯತ್ನ: ಸಂಸದೆ ಹೇಳಿಕೆ - - -
- ಡಿಎಂಎಫ್ ಅನುದಾನದಲ್ಲಿ 5 ತರಗತಿ ಕೊಠಡಿ ಹಾಗೂ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ.- ಬಾಲ್ಯವಿವಾಹ ಅಥವಾ 18 ವರ್ಷವಾದ ತಕ್ಷಣ ಆತುರದಿಂದ ಹೆಣ್ಣುಮಕ್ಕಳಿಗೆ ಪಾಲಕರು ಮದುವೆ ಮಾಡಬಾರದು.
- ಜಿಲ್ಲಾ ಖನಿಜ ನಿಧಿಯಡಿ ಕ್ಷೇತ್ರಕ್ಕೆ ಸುಮಾರು ₹11.25 ಕೋಟಿ ಅನುದಾನ ಬಿಡುಗಡೆ.- - -
ಕನ್ನಡಪ್ರಭ ವಾರ್ತೆ ದಾವಣಗೆರೆಮೊಬೈಲ್ ಫೋನ್ಗಳನ್ನು ಕೇವಲ ಸಾಮಾಜಿಕ ಜಾಲತಾಣ ಅಥವಾ ಮನರಂಜನೆಗಾಗಿ ಬಳಸದೇ, ಜ್ಞಾನಾರ್ಜನೆ, ಭಾಷಾ ಕೌಶಲ್ಯ ವೃದ್ಧಿಗಾಗಿ, ಸಂವಹನ ಕಲೆ ಹಾಗೂ ದೇಶ-ವಿದೇಶಗಳ ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ಶನಿವಾರ ಡಿಎಂಎಫ್ ಅನುದಾನದಲ್ಲಿ 5 ತರಗತಿ ಕೊಠಡಿ ಹಾಗೂ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಲೋಕಸಭಾ ಕ್ಷೇತ್ರದ ಸಮಗ್ರ ಪ್ರಗತಿ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣವೇ ನಮ್ಮ ಪ್ರಮುಖ ಗುರಿಯಾಗಿದೆ. ಜಿಲ್ಲಾ ಖನಿಜ ನಿಧಿಯಡಿ ಕ್ಷೇತ್ರಕ್ಕೆ ಸುಮಾರು ₹11.25 ಕೋಟಿ ಅನುದಾನ ಬಿಡುಗಡೆಯಾಗಿದೆ. ವಿವಿಧ ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.
ಬಾಲ್ಯವಿವಾಹ ಅಥವಾ 18 ವರ್ಷವಾದ ತಕ್ಷಣ ಆತುರದಿಂದ ಹೆಣ್ಣುಮಕ್ಕಳಿಗೆ ಪಾಲಕರು ಮದುವೆ ಮಾಡಬಾರದು. ಬದಲಿಗೆ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಭವಿಷ್ಯ ಕಟ್ಟಿಕೊಡುವತ್ತ ಗಮನಹರಿಸಬೇಕು. ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗುವತ್ತ ಪ್ರೋತ್ಸಾಹಿಸಬೇಕು. ಹೆಣ್ಣುಮಕ್ಕಳು ಸಹ ತಮ್ಮ ಪೋಷಕರ ಜೊತೆ ಮುಕ್ತವಾಗಿ ಮಾತನಾಡಿ ತಮ್ಮ ಕನಸುಗಳ ಬಗ್ಗೆ ಹೇಳಿಕೊಳ್ಳಬೇಕು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ದೊರೆಯುವ ಶೇ.7.5 ಮೀಸಲಾತಿ, ವಿದ್ಯಾರ್ಥಿ ವೇತನದ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.ಮೈಸೂರು-ಅಜ್ಮೇರ್ ಎಕ್ಸ್ಪ್ರೆಸ್ ರೈಲಿಗೆ ಹರಪನಹಳ್ಳಿ ನಿಲ್ದಾಣದಲ್ಲಿ 2 ನಿಮಿಷಗಳ ನಿಲುಗಡೆ ನೀಡುವಂತೆ ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದಷ್ಟು ಬೇಗನೆ ಇದು ಕಾರ್ಯ ರೂಪಕ್ಕೆ ಬರುವ ವಿಶ್ವಾಸವಿದೆ. ಬಳ್ಳಾರಿ-ಹೊಸಪೇಟೆ-ಹರಪನಹಳ್ಳಿ-ದಾವಣಗೆರೆ ಮಾರ್ಗವಾಗಿ ಯಶವಂತಪುರಕ್ಕೆ ಬೆಳಗಿನ ಇಂಟರ್ಸಿಟಿ ರೈಲು ಆರಂಭಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ರಾಜ್ಯ ಹೆದ್ದಾರಿ-25ರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜಗೇರಿಸಲು ಕಂಚಿಕೇರಿ- ಬೆಂಡಿಗೆರೆ ರಸ್ತೆಗಳ ಅಗಲೀಕರಣಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಧಾನ ಮಂತ್ರಿ ಕಾರ್ಯಲಯದ ಮಟ್ಟದಲ್ಲಿ ಚರ್ಚಿಸಲು ಸಂಸದರ, ಶಾಸಕರ ನಿಯೋಗ ತೆರಳಿ ಒತ್ತಡ ತರಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯಶಂಕರ, ನಗರಸಭೆ ಮಾಜಿ ಸದಸ್ಯರಾದ ಅಬ್ದುಲ್ ರೆಹಮಾನ, ಲಾಟಿ ದಾದಾಪೀರ, ಪಿಕಾರ್ಡ್ ಬ್ಯಾಂಕ್ ಸದಸ್ಯ ಶಾಂತಕುಮಾರ ರೆಡ್ಡಿ, ಲೋಕೋಪಯೋಗಿ ಎಇಇ ರಾಘವೇಂದ್ರ, ತಾಪಂ ಇಒ ಚಂದ್ರಶೇಖರ, ಬಿಇಒ ಲೇಪಾಕ್ಷಪ್ಪ, ಗುತ್ತಿಗೆದಾರ ಕೆ.ಮಜೀದ, ಮುಖಂಡ ದೇವೇಂದ್ರ ಗೌಡ, ಬಿಆರ್ಸಿ ಹೊನ್ನತ್ತೆಪ್ಪ, ಟಿಪಿಒ ಷಣ್ಮುಖಪ್ಪ, ಇಸ್ಮಾಯಿಲ್ ಎಲಿಗಾರ, ಮತ್ತೂರು ಹನುಮಂತ, ಮುಖ್ಯ ಶಿಕ್ಷಕ ಶಿವಾಜಿ ಇತರರು ಇದ್ದರು.
- - -(ಟಾಪ್ ಕೋಟ್)
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಮೇಲ್ದರ್ಜೇಗೇರಿಸಿ ಪಿಯು ಕಾಲೇಜು ಮಾಡಲಾಗುವುದು. ಒಟ್ಟಿನಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ಸಚಿವರು, ಸಂಸದರು, ರಾಜ್ಯ ಸರ್ಕಾರದ ಸಹಕಾರದಲ್ಲಿ ಹರಪನಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ.- ಎಂ.ಪಿ. ಲತಾ, ಶಾಸಕಿ, ಹರಪನಹಳ್ಳಿ ಕ್ಷೇತ್ರ.
- - --12ಕೆಡಿವಿಜಿ1: ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕಿ ಎಂ.ಪಿ.ಲತಾ ಶಂಕುಸ್ಥಾಪನೆ ನೆರವೇರಿಸಿದರು.