ಚನ್ನಪಟ್ಟಣ: ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದ್ದು, ಸಮಾನತೆಯ ಸಂವಿಧಾನ ಕೆಲವರಿಗೆ ಸೀಮಿತ ಎಂಬಂತಾಗಿದೆ ಎಂದು ಡಾ.ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾ ಅಂಬೇಡ್ಕರ್ ಬೇಸರ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಚನ್ನಪಟ್ಟಣ ತಾಲೂಕು ಶಾಖೆ ಆಯೋಜಿಸಿದ್ದ ಭೀಮೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಡಾ. ಬಿ.ಆರ್.ಅಂಬೇಡ್ಕರ್ ಅವರ ಹೋರಾಟ, ತತ್ವ ಸಿದ್ಧಾಂತಗಳಿಗೆ ಇಂದು ಬೆಲೆ ಇಲ್ಲದಂತಾಗಿದ್ದು, ಇಂದಿಗೂ ಸಮಾಜದಲ್ಲಿ ಜಾತೀಯತೆ, ಜೀತ ಪದ್ದತಿ, ಅಸ್ಪೃಸ್ಯತೆ ಜೀವಂತವಾಗಿದೆ. ಇಂದಿಗೂ ಕೆಲವೆಡೆ ದೇವಸ್ಥಾನಗಳಿಗೆ ದಲಿತ ಸಮುದಾಯಕ್ಕೆ ಪ್ರವೇಶ ಇಲ್ಲವಾಗಿದ್ದು, ಕುಡಿಯುವ ನೀರು ಸಹ ನೀಡುತ್ತಿಲ್ಲ. ಈ ಎಲ್ಲವನ್ನು ಬದಲಿಸಲು ಮತ್ತೆ ನಾವು ಅಂಬೇಡ್ಕರ್ ಅವರಂತೆ ಶಿಕ್ಷಣ, ಸಂಘಟನೆ, ಹೋರಾಟದ ಹಾದಿ ಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯ ಮತ್ತೆ ಪೂರ್ಣವಾಗಿ ಅಸ್ಪೃಸ್ಯತೆಗೆ ಒಳಗಾಗುತ್ತದೆ. ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಸಂವಿಧಾನದ ಹಕ್ಕುಗಳನ್ನು ಪಡೆಯಲು ಪ್ರತಿಯೊಬ್ಬರು ಮತದಾನದ ಅಸ್ತ್ರವನ್ನು ಸದ್ಬಳಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾವೆಲ್ಲಾ ಸಮಾಜದಲ್ಲಿ ಒಂದಲ್ಲಾ ಒಂದು ಅಧಿಕಾರ ಪಡೆದು ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ನೀಡಿರುವ ಸಮಾನತೆಯ ಸಂವಿಧಾನವೇ ಕಾರಣ. ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಅವರು ಜೀತ ಪದ್ದತಿ, ಅಸ್ಪೃಶ್ಯತೆ, ವರ್ಣಬೇಧ ಸೇರಿದಂತೆ ಹತ್ತಾರು ಸಮಸ್ಯೆಗಳ ವಿರುದ್ಧ ಹೋರಾಡಿ ಸಮಾನತೆ ನೀಡಲು ಸಂವಿಧಾನ ರಚಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಅಸ್ಪೃಸ್ಯತೆ, ಜೀತ ಪದ್ದತಿ, ದೇವಸ್ಥಾನದ ಬಹಿಷ್ಕಾರ ಎಲ್ಲವೂ ಜೀವಂತವಾಗಿದ್ದು ಇದನ್ನು ಪ್ರಶ್ನಿಸಲು ಹೋರಾಡೋರು ಇಲ್ಲವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ನಳಂದ ಬುದ್ಧ ವಿಹಾರದ ಭೋದಿ ರತ್ನ ಬಂತೇಜಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಹೋರಾಡಿದವರಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲಿನ ಶೋಷಣೆಗಳಿಗೆ ಮುಕ್ತಿ ನೀಡಲು ಹೋರಾಡಿದವರು. ಆದರೆ ಇಂದು ಶೇ.೮೦ರಷ್ಟಿರುವ ನಾವೆಲ್ಲರೂ ಅಧಿಕಾರ, ಹಕ್ಕು, ಸೌಲಭ್ಯಗಳಿಗಾಗಿ ಬೀದಿಯಲ್ಲಿ ನಿಂತು ಹೋರಾಡುವಂತಾಗಿದೆ. ನಾವು ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಪಾಲಿಸದಿದ್ದಲ್ಲಿ ಸಮಾಜದಲ್ಲಿ ಹಾಗೂ ಸಮುದಾಯದ ಏಳಿಗೆಯಲ್ಲಿ ಏನೂ ಬದಲಗುವುದಿಲ್ಲ ಎಂದರು.
ಇದೇ ವೇಳೆ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ, ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಇಂಜಿನಿಯರ್ ಶಂಕರಪ್ಪ, ತಾಲೂಕು ಅಧ್ಯಕ್ಷ ವಿಷಕಂಠು, ಜಯರಾಮು, ಶ್ರೀನಿವಾಸ್, ಖಜಾಂಚಿ ಆನಂದ್, ಸುನಿಲ್ಕುಮಾರ್, ಶಿವಶಂಕರ್, ದಲಿತ ಮುಖಂಡರಾದ ಡಾ.ಲೋಕಾನಂದ್, ಮತ್ತಿಕೆರೆ ಹನುಮಂತಯ್ಯ, ಚಕ್ಕಲೂರು ಚೌಡಯ್ಯ, ನೀಲಸಂದ್ರ ಸಿದ್ದರಾಮು, ಶೇಖರ್, ಅಪ್ಪಗೆರೆ ಪ್ರದೀಪ್, ಎಬಿವಿಪಿ ಕುಮಾರ್ ಇತರರಿದ್ದರು.
ಪೊಟೋ೧೫ಸಿಪಿಟಿ೨:ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ತಾಲೂಕು ಶಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.