ಸಾರಾಂಶ
ವೈದ್ಯಕೀಯ ಕಂಪನಿಗಳು ರೋಗವನ್ನು ಹೆಚ್ಚು ಸೃಷ್ಟಿಸುತ್ತಿದ್ದು, ಇದರ ಹಿನ್ನೆಲೆಯಲ್ಲಿ ಔಷಧಗಳ ಮಾಫಿಯಾ ಇರುವುದು ಕಾಣುತ್ತಿದೆ
ಕನ್ನಡಪ್ರಭ ವಾರ್ತೆ ಮೈಸೂರುರೋಗಗಳ ಉತ್ಪತ್ತಿಯಲ್ಲಿ ಆಧುನಿಕ ವೈದ್ಯಕೀಯ ಕ್ಷೇತ್ರದ ಪಾಲುಗಾರಿಕೆ ತುಂಬಾ ಇದೆ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಗಜಾನನ ಹೆಗಡೆ ವಿಷಾದಿಸಿದರು.
ಅವರು ಉತ್ತಿಷ್ಠ ಭಾರತ ಪ್ರತಿಷ್ಠಾನ ಮತ್ತು ಪರಮಹಂಸ ಯೋಗ ಕಾಲೇಜಿನ ಆಶ್ರಯದಲ್ಲಿ ರಾಮಕೃಷ್ಣ ನಗರದ ಪರಮಹಂಸ ಯೋಗ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವೈದ್ಯಕೀಯ ಕಂಪನಿಗಳು ರೋಗವನ್ನು ಹೆಚ್ಚು ಸೃಷ್ಟಿಸುತ್ತಿದ್ದು, ಇದರ ಹಿನ್ನೆಲೆಯಲ್ಲಿ ಔಷಧಗಳ ಮಾಫಿಯಾ ಇರುವುದು ಕಾಣುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆಯುರ್ವೇದದ ಮಹತ್ವ ಕುರಿತು ಉಪನ್ಯಾಸ ನೀಡಿದ ಹಿರಿಯ ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್, ಆಯುರ್ವೇದಕ್ಕೆ 2000 ವರ್ಷಗಳ ಇತಿಹಾಸವಿದ್ದು, ಅಥರ್ವಣ ವೇದದಲ್ಲಿ ಆಯುರ್ವೇದದ ಪ್ರಸ್ತಾಪವಿದೆ, ಅಂದಿನಿಂದ ಇಂದಿನವರೆಗೂ ಆಯುರ್ವೇದದ ವಿಚಾರಗಳಲ್ಲಿ, ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸವಾಗದೆ ಸಾರ್ವಕಾಲಿಕ ಮಹತ್ವ ಪಡೆದಿದೆ ಎಂದರು.ಹಿರಿಯ ಆಯುರ್ವೇದ ತಜ್ಞ ವೈದ್ಯ ಡಾ.ಎ.ಎಸ್. ಚಂದ್ರಶೇಖರ್ ಧನ್ವಂತರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, 84 ಲಕ್ಷ ಜೀವರಾಶಿಗಳಲ್ಲಿ ಪ್ರಕೃತಿಯು ಕೂಡ ನಮ್ಮ ಪೂರ್ವಿಕರ ಪ್ರತೀಕವಾಗಿದೆ ಎಂದರು. ಪ್ರಕೃತಿಯ ಗಿಡಮೂಲಿಕೆಗಳುಳ್ಳ ಆಯುರ್ವೇದ ಇಂದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ ಎಂದರು.
ಪರಮಹಂಸ ಯೋಗ ಕಾಲೇಜಿನ ನಿರ್ದೇಶಕ ಶಿವಪ್ರಕಾಶ್ , ಉತ್ತಿಷ್ಠ ಭಾರತ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವಿ. ನಾಗೇಂದ್ರ ಬಾಬು, ಸಂಚಾಲಕ ಎನ್. ಅನಂತ ಇದ್ದರು.