ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸುಮಾರು 12 ಮಾರಕ ರೋಗಗಳನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾಡುತ್ತಿದ್ದು, ಶಿಶುಮರಣ ತಡೆಗಟ್ಟುವಲ್ಲಿ ಲಸಿಕಾಕರಣ ಮಹತ್ತರ ಪಾತ್ರ ವಹಿಸುತ್ತಿದೆ.

ರೋಣ: ಡಿ. 21ರಿಂದ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸುವುದರ ಮೂಲಕ ಪೋಲಿಯೋ ರೋಗದ ವಿರುದ್ಧ ಗೆಲುವನ್ನು ಮುಂದುವರಿಸೋಣ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು. ಪಟ್ಟಣದ ಹುಡೇದ ಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯಗಳ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸುಮಾರು 12 ಮಾರಕ ರೋಗಗಳನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾಡುತ್ತಿದ್ದು, ಶಿಶು ಮರಣ ತಡೆಗಟ್ಟುವಲ್ಲಿ ಲಸಿಕಾಕರಣ ಮಹತ್ತರ ಪಾತ್ರ ವಹಿಸುತ್ತಿದೆ. ಈಗಾಗಲೇ ಪೋಲಿಯೋ ಮುಕ್ತಗೊಂಡಿರುವ ದೇಶದಲ್ಲಿ ಪೋಲಿಯೋ ರೋಗದ ವಿರುದ್ಧ ಗೆಲುವು ಸಾಧಿಸಿದ್ದು, ಈ ಗೆಲುವನ್ನು ಮುಂದುವರಿಸೋಣ ಎಂದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಇತರೆ ಸಂಘ- ಸಂಸ್ಥೆಗಳ ನೆರವಿನಿಂದ ಭಾರತ ಪೋಲಿಯೋ ಮುಕ್ತಗೊಂಡಿರುವುದು ಸಂತಸದ ಸಂಗತಿ. ಈ ವರ್ಷದ ಡಿ. 21ರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ 29,690 ಮಕ್ಕಳನ್ನು ಗುರಿಯಾಗಿಸಿಕೊಂಡು 191 ತಂಡಗಳನ್ನು ರಚಿಸಿಕೊಂಡು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.

ಈ ವೇಳೆ ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಅರವಿಂದ್ ಕಂಬಳಿ, ಅಬ್ಬಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿರ್ಮಲಾ ನಾಶಿಪುಡಿ, ಯಲ್ಲಪ್ಪ ಕಿರೇಸೂರ, ಸಂಜೀವ ದೊಡ್ಡಮನಿ, ಸಂಜೀವ ರಡ್ಡೇರ, ಲಿಂಗನಗೌಡ ಲಕ್ಕನಗೌಡ್ರ, ಡಾ. ರಘು ಹೊಸೂರ, ಡಾ. ಸುನಿಲ್ ಸಾರಂಗಮಠ, ಡಾ. ದಾನಮ್ಮ ಹುಲಕುಂದ, ಡಾ. ಶ್ವೇತಾ ಹೊಸಳ್ಳಿ, ಡಾ. ಪ್ರೇಮ ಬಾಬಣ್ಣವರ, ಡಾ. ಮಹೇಶ ಹೊಸಕೇರಿ, ಡಾ. ನಾಗರಾಜ ಸತ್ತಿಗೇರಿ, ಬಿ.ಆರ್. ಮಣ್ಣೇರಿ, ಬಿ.ಆರ್. ಪಾಟೀಲ, ರಹೀಮಾ ಅತ್ತಾರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.