ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸಿ

| Published : Apr 02 2024, 01:00 AM IST

ಸಾರಾಂಶ

ಕಾಲು ಬಾಯಿ ರೋಗ ಲಸಿಕಾ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸುವಂತೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಕಾಲು ಬಾಯಿ ರೋಗ ಲಸಿಕಾ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸುವಂತೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಹೇಳಿದರು.

5ನೇ ಸುತ್ತಿನ ಕಾಲುಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಏ.1 ರಿಂದ 30 ರವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎತ್ತು, ಹೋರಿ, ಆಕಳು, ಎಮ್ಮೆ ಸೇರಿದಂತೆ ಇತರೆ ಪ್ರಾಣಿಗಳಲ್ಲಿ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸೋರುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿದೆ. ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆಯೊಂದೇ ಮಾರ್ಗವಾಗಿದೆ. ಜಾನುವರುಗಳಿಗೆ ರೋಗ ಹರಡದಂತೆ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿದರು.

ತಾಲೂಕಿಗೆ ಒಂದು ಲಕ್ಷ ಡೋಸ್ ಲಸಿಕೆ ಸರಬರಾಜಾಗಿದ್ದು, 21 ತಂಡಗಳನ್ನೊಳಗೊಂಡ ಒಟ್ಟು 68 ಜನ ಲಸಿಕೆದಾರರು ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಲಸಿಕೆ ಹಾಕುವ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದಲ್ಲಿ ಲಸಿಕೆದಾರರಿಗೆ ತುರ್ತು ಚಿಕಿತ್ಸಾ ಕೀಟ್ ವಿತರಿಸಲಾಲುವುದು. ಕಾಲುಬಾಯಿ ರೋಗದ ಲಸಿಕೆ ಜೊತೆಗೆ ರೇಬೀಸ್ ಲಸಿಕೆಯನ್ನು ರೈತ ಬಾಂಧವರು ಸಾಕು ನಾಯಿ, ಬೀದಿ ನಾಯಿಗಳಿಗೆ ಹಾಕಿಸಿ ಈ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.