ಸಾರಾಂಶ
ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಿಎಂ ನಡೆದುಕೊಂಡಿದ್ದಾರೆ. ಶೋಷಣೆಗೆ ಒಳಗಾದ ಜನಾಂಗದ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಿದ್ದ ಹಣ ಡೈವರ್ಟ್ ಮಾಡಿದ್ದಾರೆ. ದಲಿತರಿಗೆ ಮೀಸಲಿದ್ದ ಹಣವನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಹುಬ್ಬಳ್ಳಿ
ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.ನಗರದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಿಎಂ ನಡೆದುಕೊಂಡಿದ್ದಾರೆ. ಶೋಷಣೆಗೆ ಒಳಗಾದ ಜನಾಂಗದ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಿದ್ದ ಹಣ ಡೈವರ್ಟ್ ಮಾಡಿದ್ದಾರೆ. ದಲಿತರಿಗೆ ಮೀಸಲಿದ್ದ ಹಣವನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗಿಸಿಕೊಂಡಿದ್ದಾರೆ. ಅಹಿಂದ ವರ್ಗವನ್ನು ಮೆಟ್ಟಿಲಾಗಿಸಿಕೊಂಡ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ ಎಂದರು.
ಕಳೆದ ವರ್ಷ ₹11,140 ಕೋಟಿ, ಈ ವರ್ಷ ₹13 ಸಾವಿರ ಕೋಟಿ ಡೈವರ್ಟ್ ಮಾಡಿದ್ದಾರೆ. ಸುಮಾರು ₹25 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ಕೂಡಲೇ ಎಸ್.ಸಿ., ಎಸ್.ಟಿ. ಮೀಸಲಿಟ್ಟ ಹಣ ಅವರಿಗೇ ಬಳಸಬೇಕು. ವಾಲ್ಮೀಕಿ ನಿಗಮ ಹಗರಣ ಸರ್ಕಾರಿ ಖಜಾನೆಯ ಹಗಲು ದರೋಡೆ ಮಾಡಿದೆ. ಖಾತೆಯಲ್ಲಿದ್ದ ಹಣವನ್ನು ಬೇನಾಮಿ ಖಾತೆಗೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಬರೀ ನಾಗೇಂದ್ರ ರಾಜೀನಾಮೆ ಸಾಕಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಇದರ ಹೊಣೆ ಹೊರಬೇಕು. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.ಈಗ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಮುಂದಾಗಿದ್ದಾರೆ. ಅನೇಕ ಆಯೋಗಗಳು ರಚನೆಯಾಗಿವೆ. ಕರ್ನಾಟಕದಲ್ಲಿ ನೂರಾರು ಆಯೋಗಗಳು ರಚನೆಯಾಗಿವೆ. ಅಯೋಗದ ವರದಿಗಳು ರೆಕಾರ್ಡ್ ರೂಮ್ ನಲ್ಲಿ ಭದ್ರವಾಗಿವೆ. ಇದುವರೆಗೂ ಯಾವುದೇ ಪ್ರಕರಣದಲ್ಲಿಯೂ ಕ್ರಮವಾಗಿಲ್ಲ. ಜನರಿಗೆ ಮೋಸ ಮಾಡುವ ಮತ್ತೊಂದು ಹುನ್ನಾರ ಇದಾಗಿದೆವೆಂದರು.