ವಾಲ್ಮೀಕಿ ಹಗರಣದ ಆಡಿಯೋ ಬಾಂಬ್‌!

| Published : Jul 10 2024, 12:36 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್‌ ಮತ್ತು ಲೆಕ್ಕಪರಿಶೋಧಕ ಪರಶುರಾಮ್ ಮಧ್ಯೆ ನಡೆದಿದೆ ಎನ್ನಲಾದ ‘ಡೀಲ್’ ಮಾತುಕತೆ ಆಡಿಯೋ ಮಂಗಳವಾರ ಬಹಿರಂಗವಾಗಿ ಭಾರಿ ಸಂಚಲನ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್‌ ಮತ್ತು ಲೆಕ್ಕಪರಿಶೋಧಕ ಪರಶುರಾಮ್ ಮಧ್ಯೆ ನಡೆದಿದೆ ಎನ್ನಲಾದ ‘ಡೀಲ್’ ಮಾತುಕತೆ ಆಡಿಯೋ ಮಂಗಳವಾರ ಬಹಿರಂಗವಾಗಿ ಭಾರಿ ಸಂಚಲನ ಸೃಷ್ಟಿಸಿದೆ.ಈ ಪ್ರಕರಣದಲ್ಲಿ ಈ ಇಬ್ಬರೂ ಅಧಿಕಾರಿಗಳು ಬಂಧಿತರಾಗಿದ್ದು, ಈ ಡೀಲ್ ಮಾತುಕತೆ ಆಡಿಯೋದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರವರ ಹೆಸರು ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಆದರೆ ಅವರ ಸೋದರ ಸಂಬಂಧಿ ಬಳ್ಳಾರಿ ಜಿಲ್ಲೆಯ ನೆಕ್ಕುಂಟಿ ನಾಗರಾಜ್ ಇಡೀ ಪ್ರಕರಣದ ಸೂತ್ರಧಾರ ಎನ್ನುವಂತೆ ಅಧಿಕಾರಿಗಳು ಮಾತನಾಡಿದ್ದಾರೆ. ಹಾಗೆಯೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಹಣ ವರ್ಗಾವಣೆ ಮಾಹಿತಿಯೇ ಇರಲಿಲ್ಲವೆಂದು ಈ ಇಬ್ಬರು ಅಧಿಕಾರಿಗಳ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ದದ್ದಲ್ ಆಪ್ತ ಎನ್ನಲಾದ ಸುನೀಲ್‌ ಡೀಲ್‌ ಪಾತ್ರವಹಿಸಿದ್ದಾನೆ ಎನ್ನಲಾಗಿದೆ.

ಇನ್ನು ತಾವು ತಪ್ಪು ಮಾಡಿ ಸಿಕ್ಕಿಬಿದ್ದಿದ್ದೇವೆ ಎಂದು ಪರೋಕ್ಷವಾಗಿ ಪದ್ಮನಾಭ ಮತ್ತು ಪರಶುರಾಮ್ ಮಾತನಾಡಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಪದ್ಮನಾಭ, ಸಿಬಿಐನವರು ಬರುತ್ತಾರೆ. ನಾವು 2 ವರ್ಷ ಜೈಲಿನಲ್ಲಿರಬೇಕಾಗುತ್ತದೆ. ಕೊನೆಗೆ ಜಾಮೀನು ಪಡೆದು ಹೊರಬರಬೇಕಾಗುತ್ತದೆ ಎಂದಿರುವುದು ಸಹ ಆಡಿಯೋದಲ್ಲಿದೆ.

ಈ ಹಗರಣ ಬೆಳಕಿಗೆ ಬಂದ ನಂತರ ಎಸ್‌ಐಟಿ ಅಧಿಕಾರಿಗಳು, ಪದ್ಮನಾಭ್‌ ಹಾಗೂ ಲೆಕ್ಕಪರಿಶೋಧಕ ಪರಶುರಾಮ್‌ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಹಾಗೆಯೇ ಪದ್ಮನಾಭ ಬಳಿ 3.4 ಕೋಟಿ ರು ಹಣ ಕೂಡ ಜಪ್ತಿಯಾಗಿದೆ. ಈಗ ಡೀಲ್ ಆಡಿಯೋ ಹೊರಬಂದಿರುವುದು ನಿಗಮದ ಹಗರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.ಏನು ಮಾತುಕತೆ?:ಜಿ.ಜೆ ಪದ್ಮನಾಭ: ಕ್ಯಾಶ್ ಬುಕ್ ಕ್ಲೋಸ್ ಮಾಡಿ ಅಂತಾ ಯಾರು ಫೋನ್ ಮಾಡಿದ್ದು?ಪರಶುರಾಮ್: ಸುನೀಲ್ (ನಿಗಮದ ಅಧ್ಯಕ್ಷರ ಆಪ್ತ ಸಹಾಯಕ)ಪದ್ಮನಾಭ್‌ : ಸುನೀಲ್..? ಏನಂತೆ?ಪರಶುರಾಮ್: ಏನೂ ಗೊತ್ತಿಲ್ಲ ಸರ್. ಕ್ಯಾಶ್ ಬುಕ್ ಡಿಟೇಲ್ಸ್ ಇಟ್ಕೊಳಿ ಬರ್ತಿನಿ ಅಂದ್ರು. 5 ಕೋಟಿ ಬಂದಿದೆ ಅಂದ್ರು.ಪದ್ಮನಾಭ್‌: ಯಾರು?ಪರಶುರಾಮ್: 2 ಕೋಟಿ ರಾತ್ರಿ ಬರೋದಿತ್ತಲ್ಲ. ಅಲ್ಲಿ ಹಣ ವರ್ಗಾವಣೆ ಬಗ್ಗೆ ಏನೂ ಅರ್ಥವಾಗ್ತಿಲ್ಲ.ಪದ್ಮನಾಭ: ಅದೇ ಪೇಮೆಂಟ್ ಮಾಡಿದ್ದೆ ಅಂತಾರೆ.ಪರಶುರಾಮ್: ನೆಕ್ಕಂಟಿ ನಾಗರಾಜ್ (ಮಾಜಿ ಸಚಿವ ನಾಗೇಂದ್ರ ಸಂಬಂಧಿ) ಕಡೆಯದ್ದು.ಪದ್ಮನಾಭ್‌: ಮಾಡಿದ್ದಾರಲ್ಲ.ಪರಶುರಾಮ್: ಅದೇ ಮಾಡಿದ್ದಾರೆ. ಮುಂದೇನು ಮಾಡ್ತಾರೆ ಅಂತ ಏನು ಗ್ಯಾರಂಟಿ?ಪದ್ಮನಾಭ: ಏನು ಗ್ಯಾರಂಟಿ ಅಂದ್ರೆ ಕಾಯೋದೇ ಗ್ಯಾರಂಟಿ. ಏನು ಮಾಡೋಕಾಗುತ್ತೆ?ಪರಶುರಾಮ್: ನಿಮ್ಮ ಜೊತೆ ಯಾರು ಕಾಂಟ್ಯಾಕ್ಟ್ನಲ್ಲಿ ಇದ್ದಾರೆ ಸರ್?ಪದ್ಮನಾಭ: ಅದೇ ನಾಗರಾಜ್ ಬಾಮೈದ.ಪರಶುರಾಮ್: ನಾನು ಅವತ್ತೇ ಹೇಳಿದ್ದೆ ಸರ್, ಬೇಡ ಬೇಡ ಅಂತಾ. ಈ ಸೂ*. ಮಕ್ಕಳು ಬಂದ್ರಲ್ಲ.ಪದ್ಮನಾಭ್‌: ನಾವು ಅದನ್ನು ಹೇಳಬಾರದು. ಮಿನಿಸ್ಟರ್ ಆಫೀಸ್‌ನಿಂದ ಹೇಳಿದ್ರು. ನಾಗರಾಜ್ ಕಡೆಯಿಂದ ಒತ್ತಡ ಬಂತು. ನಾವು ಆಯಿತು ಅಂತ ಇದ್ದ ಅಕೌಂಟ್ ಟ್ರಾನ್ಸ್ಫರ್ ಮಾಡಿಕೊಟ್ವಿ. ಇದೊಂದು ಹೇಳಬೇಕು. ಒಂದೇ ಮಾತಲ್ಲಿ ಹೇಳಬೇಕು. ನಾವೇ ಕಂಪ್ಲೇಟ್‌ ಮಾಡಿದ್ವಿ. ಎಲ್ಲಾ ಫೇಕ್ ಸಿಗ್ನೇಚರ್ ಮಾಡಿರೋದು ನಿಜಾನಾ? ಫೇಕ್ ವ್ಯಕ್ತಿಗಳಿಗೆ ಚೆಕ್ ಕೊಟ್ಟಿದ್ದಾರೆ. ನಾವು ಕಂಪ್ಲೇಟ್ ಕೊಟ್ಟಿದ್ದೀವಿ. ಅಲ್ವಾ.? ದುಡ್ಡು ಬಂದ್ಮೇಲೆ ಅದರ ಮೇಲೆ ಏನ್ ಆಕ್ಷನ್ ಬೇಕೋ ತೆಗೆದುಕೊಳ್ಳೋಣ.ಪರಶುರಾಮ್: ಬ್ಯಾಂಕ್‌ನವರು ಈಗ ಕೇಸ್ ಮಾಡ್ತಿಲ್ವಾ. ನಮ್ಮ ದುಡ್ಡು ನಮಗೆ ಕೊಡ್ತಾರಾ? ಮುಂದೇನ್‌ ಮಾಡೋದು?ಪದ್ಮನಾಭ್‌: ಸಿಬಿಐ ಬರುತ್ತೆ. 2 ವರ್ಷ ಜೈಲನಲ್ಲಿರಬೇಕಾಗುತ್ತೆ. ಜಾಮೀನು ಮಾಡಿಸ್ಕೋಬೇಕು ಅಷ್ಟೇ.ಪರಶುರಾಮ್- ಮಿನಿಸ್ಟರ್ (ಆಗ ಸಚಿವರಾಗಿದ್ದವರು ನಾಗೇಂದ್ರ) ಗಮನಕ್ಕೆ ಇಲ್ವಾ ಸರ್?

ಪದ್ಮನಾಭ್‌- ಯಾವುದು?

ಪರಶುರಾಮ್- ನೆಕ್ಕುಂಟಿ ನಾಗರಾಜ್ ಅಕೌಂಟ್ಸ್ ಮಾಡಿರೋದು.

ಪದ್ಮನಾಭ್‌- ಅದೂ ಗೊತ್ತು ಅವರಿಗೆ. ಅವರೇ ಅಲ್ವಾ ಶಾಂಗ್ರಿಲಾ ಹೋಟೆಲ್‌ಗೆ ಕರೆಸಿ ಮಾತನಾಡಿಸಿದ್ದು.

ಪರಶುರಾಮ್- ಹೌದು ಸರ್. ಅಕೌಂಟ್ ಓಪನ್‌ ದಿನ ನೆಕ್ಕುಂಟೆ ನಾಗರಾಜ್‌ ಆಫೀಸ್ಸಿಗೆ ಬಂದಿದ್ದರು.

ಪದ್ಮನಾಭ್‌- ಹೌದು. ಅಕೌಂಟ್ ಟ್ರಾನ್ಸ್‌ಫರ್‌ಗೆ ಎಷ್ಟು ಸಲ ಕಾಲ್‌ ಮಾಡಿದ್ರು.

ಪರಶುರಾಮ್- 50 ಸಲ ಕಾಲ್‌ ಮಾಡಿ ಮಾಡಿ ಇಟ್ರು. ನನಗೆ ನಿಮ್ಮ ಮೇಲೆ ಜಾಸ್ತಿ ನಂಬಿಕೆ ಸರ್. ನೀವೆಲ್ಲ ಚೆಕ್ ಮಾಡ್ತೀರಿ.

ಪದ್ಮನಾಭ್‌- ಈ ಬ್ಯಾಂಕ್ ಅಕೌಂಟ್ಸ್‌ ಎಲ್ಲ ನಾನೆಲ್ಲಿ ನೋಡ್ತೀನಿ? ಎಲೆಕ್ಷನ್‌ ಡ್ಯೂಟಿಗೆ ಹೋಗುವಾಗ ಸರಿಯಾಗಿ ಅಕೌಂಟ್ಸ್ ನೋಡಿಲ್ಲ. ಅದೊಂದು ತಪ್ಪು ಮಾಡಿದ್ರೀ.

ಪರಶುರಾಮ್- ಅಲ್ಲ ಸರ್‌. ನಾನು ಚಂದ್ರಶೇಖರ್‌ (ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ)ಗೆ ಹೋಗಿ ಬನ್ನಿ ಅಂತ ಹೇಳಿದೆ. ಈಗ 5 ಕೋಟಿ ಹಾಕಿದ್ದಾರೆ. ಉಳಿದ ಹಣ ಹಾಕಿಬಿಟ್ಟರೆ ಸಮಸ್ಯೆ ಇರಲ್ಲ ಅಲ್ವಾ ಸರ್.

ಪದ್ಮನಾಭ್‌- ತಪ್ಪು ತಪ್ಪೇ ಅಲ್ಲವೇನಯ್ಯ. ಇದೆಲ್ಲ ಗೊತ್ತಾದರೆ.. ನಮಗೆ ಗೊತ್ತಿರೋರೆಲ್ಲ ಇನ್ವಾಲ್‌ ಆಗಿದ್ದರಾಲ್ಲಯ್ಯ.

ಪರಶುರಾಮ್- ಹಣ ಬಂದ್ಮೇಲೆ ಸಮಸ್ಯೆಯಾದರೆ ಏನ್ಮಾಡೋದು? ನಾವು ಸುಮ್ಮನಿದ್ದರೆ ಆಯ್ತು ಅಷ್ಟೇ ಅಲ್ವಾ ಸರ್‌.

ಪದ್ಮನಾಭ್‌- ನಮ್ಮ ಕೆಲಸ ನಾವು ಮಾಡೋಣ. ಇಲ್ಲವೆಂದರೆ ಜೈಲಿಗೆ ಹೋಗೋಣ.

ಪರಶುರಾಮ್- ಇದರಿಂದ ಹೊರ ಬರೋದು ಹೇಗೆ ಸರ್‌?

ಪದ್ಮನಾಭ್‌- ನಾನು ಇಡೀ ರಾತ್ರಿ ಕಣ್ಮುಚ್ಚಿಲ್ಲ.

ಪರಶುರಾಮ್- ದುಡ್ಡು ಬಂದ್ಮೇಲೆ ಏನ್ಮಾಡೋದು ಸರ್‌?

ಪದ್ಮನಾಭ್‌- ಫೇಕ್ ಚೆಕ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ ಅಂತ ಕ್ರಿಮಿನಲ್ ಕೇಸ್ ಕೊಟ್ಟಿದ್ದಾರೆ. ಸಿಬಿಐನವರು ಬಂದ್ರೆ 2 ವರ್ಷಗಳು ಜೈಲಿನಲ್ಲೇ ಇರಬೇಕು. ಲೋಕಲ್ (ರಾಜ್ಯ) ಪರವಾಗಿಲ್ಲ.

ಪರಶುರಾಮ್‌- ಸರ್ ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ನಿಮ್ಮನ್ನು ನಂಬಿದ್ದೇನೆ. ನಿಮ್ಮ ಕಾಲ್ಹಿಡಿದುಕೊಳ್ಳುತ್ತೇನೆ. ನಿಮ್ಮ ಮಾತಿನ ಮೇಲೆ ನಾನು ಹಣ ವರ್ಗಾವಣೆ ಮಾಡಿಸಿದೆ.

ಪದ್ಮನಾಭ್‌- ನಿಜ ಇದರಲ್ಲಿ ಎರಡು ಮಾತಿಲ್ಲ. ನನ್ನ ವಿಶ್ವಾಸದ ಮೇಲೆ ಇದೆಲ್ಲ ಮಾಡಿದೆ.

ಪರಶುರಾಮ್‌- ನನ್ನ ಫ್ಯಾಮಿಲಿ ಸೂಸೈಡ್ ಮಾಡಿಕೊಳ್ಳುತ್ತಾರೆ ಸರ್‌.

ಪದ್ಮನಾಭ್- ನಾನು ನನ್ನ ಹೆಂಡ್ತಿನಾ ಮಂತ್ರಾಲಯಕ್ಕೆ ಕಳುಹಿಸಿದ್ದೇನೆ. ಇಡೀ ರಾತ್ರಿ ನಿದ್ದೆ ಮಾಡಿಲ್ಲ. ನನ್ನದು ಸ್ವಾರ್ಥವಿಲ್ಲ. ನಿನ್ನದು ಸ್ವಾರ್ಥವಿಲ್ಲ. ಅವ್ರು (ನೆಕ್ಕುಂಟೆ ನಾಗರಾಜ್‌) ಹೇಳಿದ್ರು ಮಾಡಿದ್ದೀವಿ. ಸಣ್ಣಪುಟ್ಟ ಕೊಟ್ಟಿದ್ದಾರೆ.

ಪರಶುರಾಮ್- ನೀವು ನಮ್ಮ ಜೊತೆ ಇರಬೇಕು ಸರ್‌.

ಪದ್ಮನಾಭ್‌- ನಾನು ಇರುತ್ತೇನೆ. ನನಗೆ ಯಾರೂ ಲಾಯರ್ ಇರುತ್ತಾರೋ ಅವರೇ ನಿನಗೂ ಇರುತ್ತಾರೆ. ಹೆದರಬೇಡ.

ಪರಶುರಾಮ್- ಅದಕ್ಕೆ ಸರ್‌ ನಾವಿಬ್ಬರು ಛೇರ್ಮನ್ (ಬಸನಗೌಡ ದದ್ದಲ್‌) ಅವರ ಹತ್ತಿರ ಹೋಗಿ ಮಾತಾಡೋಣ.

ಪದ್ಮನಾಭ್‌- ಅದಕ್ಕೆ ನಾನು ಬೆಳಗ್ಗೆ ಹೋಗಿದ್ದೆ. ಅವರಿಗೆ (ಬಸನಗೌಡ ದದ್ದಲ್‌) ವಿಶ್ ಮಾಡಿ ಬಂದೆ. ಸುನೀಲ್‌ ಅಲ್ಲೇ ಇದ್ದ.

ಪರಶುರಾಮ್- ಸುನೀಲ್ ಹೇಳಿದ್ದರೆ ಅವರು ಕೇಳುತ್ತಾರೆ ಅಷ್ಟೇ.

ಪದ್ಮನಾಭ್- ಹೌದು ಸುನೀಲ್ ಹೇಳಿದ್ದನ್ನಷ್ಟೇ ಕೇಳುತ್ತಾರೆ. ಅಡಿಟರ್‌ ಬರ್ತಾರಂತೆ ಅವರ ಜತೆ ಮಾತನಾಡಿ. ಟೆಂಪ್ಟಾಗಬೇಡಿ. ಕೂಲ್ ಆಗಿರ್ರೀ. ನಡೀರಿ ಹೋಗೋಣ.