ಸಾಮಾಜಿಕ ಗೌರವ ತರುವ ಮೌಲ್ಯಯುತ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ ಎಂದು ಸಾಗರದ ನಿವೃತ್ತ ಪ್ರಾಧ್ಯಪಕ ಡಾ.ಕೆ.ಪ್ರಭಾಕರ ರಾವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀರೂರು
ಸಾಮಾಜಿಕ ಗೌರವ ತರುವ ಮೌಲ್ಯಯುತ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ ಎಂದು ಸಾಗರದ ನಿವೃತ್ತ ಪ್ರಾಧ್ಯಪಕ ಡಾ.ಕೆ.ಪ್ರಭಾಕರ ರಾವ್ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶನಿವಾರ 2025-26ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ,ಕ್ರೀಡಾ, ಯೂತ್ ರೆಡ್ ಕ್ರಾಸ್, ರಾ.ಸೇ.ಯೋ, ರೋವರ್ಸ್ ಮತ್ತು ರೇಂಜರ್ಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಮಕ್ಕಳು ಅತಿ ಹೆಚ್ಚು ಅಂಕ ಪಡೆಯಬೇಕು ಎಂಬ ಆಸೆಯಿಂದ ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೆ ಮುಖ್ಯ. ಶೈಕ್ಷಣಿಕವಾಗಿ ಸಬಲೀಕರಣಗೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣವಾಗಿ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಂತೆ , ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು, ಹೆಣ್ಣು ಕೀಳರಿಮೆ ಬಿಟ್ಟು ಆತ್ಮಸ್ಥೈರ್ಯ ಮೈಗೂಡಿಸಿಕೊಂಡಾಗ ಸಮಾಜದಲ್ಲಿನ ಎಲ್ಲ ದುಷ್ಟ ಶಕ್ತಿಗಳನ್ನು ಎದುರಿಸಬಹುದು. ಓದಿನಲ್ಲಿ ಶ್ರದ್ದೆ ಹೊಂದಿ ಪೋಷಕರು ಮತ್ತು ಗುರುಗಳಿಗೆ ಗೌರವ ನೀಡಿ ಸಮಾಜದ ಋಣ ತೀರಿಸಬೇಕು, “ಶಿಸ್ತು” ಗುರಿ ಮತ್ತು ಸಾಧನೆಗೆ ಅಡಿಪಾಯವಾಗಲಿದೆ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಡೂರು ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಎನ್,ಗಿರೀಶ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ನಿರ್ಧರಿಸಿರೂಪಿಸಿಕೊಳ್ಳಬೇಕು, ಮುಂದಿನ ಜೀನವದ ಬಗ್ಗೆ ಸ್ಪಷ್ಟ ಗುರಿ ,ದಾರಿ ಕಂಡುಕೊಳ್ಳಬೇಕು . ಸಮಾಜ ಗೌರವ , ಅಂತಸ್ತು, ಎಲ್ಲವನ್ನು ನಮಗೆ ಕೊಟ್ಟಿದೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬುದನ್ನು ಒಂದು ಕ್ಷಣ ಯೋಚಿಸಬೇಕು.ಪದವಿ ಶಿಕ್ಷಣ ಪಡೆದು ಹೊರಹೊಮ್ಮುತ್ತಿರುವ ನೀವು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತು ಸಮ ಸಮಾಜದ ರಾಯಬಾರಿಗಳಾಗಬೇಕು ಎಂದರುಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಹರೀಶ್ ಕುಮಾರ್ ಮಾತನಾಡಿ, ಸ್ಪರ್ದಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಹೆಚ್ಚಿನ ಪೈಪೋಟಿಯಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅದೃಷ್ಟದಿಂದ ಏನು ಬರುವುದಿಲ್ಲ, ಎಲ್ಲವೂ ಲಬಿಸುವುದು ಸತತ ಪರಿಶ್ರಮ ಮತ್ತು ಪ್ರಯತ್ನದಿಂದ. ಪರೀಕ್ಷೆಗಳು ವಿದ್ಯಾರ್ಥಿಗಳ ಪ್ರತಿಭೆ ಅಳೆಯುವ ಮಾನದಂಡವಾಗಿದ್ದು, ವಿಷಯದ ಆಳವಾದ ಅರಿವಿನ ಮೂಲಕ ಕಲಿತ ವಿದ್ಯೆಗೆ ಹೆಚ್ಚಿನ ಮಹತ್ವವಿದ್ದು ವರ್ಷವಿಡಿ ಕಲಿತ ಜ್ಞಾನವನ್ನು ಪರೀಕ್ಷೆಯ ಮೂಲಕ ವ್ಯಕ್ತಪಡಿಸಲು ಏಕಾಗ್ರತೆ ಮುಖ್ಯ ಎಂದರು.
ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ್ ಕಳೆದ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು,ಪ್ರಾದ್ಯಾಪಕರಾದ ಡಾ.ಕೇದಾರನಾಥ ಸ್ವಾಮಿ.ಆರ್, ನಾಗೇಶ್, ಯೋಗೀಶ್, ಜಿ,ಸಿ.ಪ್ರಸಾದ್ ಕುಮಾರ್, ಡಾ.ಮಂಜುಳ, ಬಸವರಾಜ್, ಲೋಕಾಂಬಿಕ ಮತ್ತು ರಾಜೇಶ್ವರಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.