ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ: ಸಿಸ್ಟರ್ ಅರ್ಪಿತಾ

| Published : Oct 17 2025, 01:03 AM IST

ಸಾರಾಂಶ

ಸಂತ ಅನ್ನಮ್ಮ ಶಾಲೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ ಇದೆ. ಹಾಗಾಗಿ ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಮೈಗೂಡಿಸಿಕೊಂಡು ಕಲಿಕೆಗೆ ಗಮನ ಕೊಡುವಂತೆ ಸಂತ ಅನ್ನಮ್ಮ ಮಾಧ್ಯಮಿಕ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಅರ್ಪಿತಾ ಕರೆ ನೀಡಿದರು.ಸಂತ ಅನ್ನಮ್ಮ ಶಾಲೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಜೊತೆಗೆ ಆಹಾರ, ಪರಿಸರ, ಕಲೆ, ಸಾಹಿತ್ಯ, ಕ್ರೀಡಾಕೂಟಗಳು ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಬಾಲವಾಡಿ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ಹೂವು, ಹಣ್ಣು, ತರಕಾರಿಗಳ ಉಡುಗೆ ಧರಿಸಿ ಅವುಗಳ ಗುಣ ಲಕ್ಷಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ನೆರೆದಿದ್ದವರನ್ನು ರಂಜಿಸಿದರು.

ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ತೀರ್ಪುಗಾರರಾಗಿ ಭಾಗ್ಯಲಕ್ಷ್ಮೀ ಬಿ.ಜಿ. ಹಾಗೂ ವಿಕ್ಕಿ ಮಾಸ್ಟರ್ ಕಾರ್ಯನಿರ್ವಹಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರು, ಶಿಕ್ಷಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಈ ಸಂದರ್ಭ ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ, ಸಂತ ಅನ್ನಮ್ಮ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಲೆನಿಟ್, ಶಾಲಾ ಶಿಕ್ಷಕಿಯರಾದ ಲೇನಿ, ಸುನಿತಾ, ತೆರೇಸ ಸೇರಿದಂತೆ ಪೋಷಕರು ಇದ್ದರು.