ಕನ್ನಡಪ್ರಭ ವಾರ್ತೆ ಶಿರಾಸರ್ಕಾರಿ, ಅನುದಾನಿತ ಶಾಲೆಗಳು ಮಕ್ಕಳಿಗೆ ಸಂಸ್ಕಾರಯುತ ಸಂಬಂಧಗಳ ಮೌಲ್ಯಗಳೇನು ಎಂಬುವನ್ನು ಕಲಿಸಿಕೊಡುತ್ತವೆ ಎಂದು ಶ್ರೀಕ್ಷೇತ್ರ ಎಲೆರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ ಹನುಮಂತನಾಥ ಸ್ವಾಮೀಜಿಯವರು ಹೇಳಿದರು.

ಅವರು ಶಿರಾ ತಾಲೂಕಿನ ಹನುಮಂತನಗರದ ಕೆ.ಮಲ್ಲಣ್ಣ ಸ್ಮಾರಕ ಪ.ಪೂ. ಕಾಲೇಜು ಹಾಗೂ ಸುತ್ತಮುತ್ತ ಇರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲೇಖನಿ ಹಾಗೂ ಭಗವದ್ಗೀತೆಯ ಪುಸ್ತಕಗಳನ್ನು ಉಚಿತವಾಗಿ ನೀಡಿ ಮಾತನಾಡಿದರು.

ಬಡತನದ ಕಾರಣಕ್ಕೆ ನೀವು ಎಂದು ನಿಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು ಅಂತಹ ಮಕ್ಕಳನ್ನು ನಮ್ಮ ಶ್ರೀ ಮಠ ದತ್ತು ತೆಗೆದುಕೊಂಡು ಉನ್ನತ ಶಿಕ್ಷಣದವರೆಗೂ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುವುದು ಹಾಗೂ ಬಿ ಇ , ಮೆಡಿಕಲ್ ಹಾಗೂ ಐಎಎಸ್ ,ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಾಯ ನೀಡಲಾಗುವುದೆಂದು ಸ್ವಾಮೀಜಿಯವರು ತಿಳಿಸಿದ ಅವರು ವಿದ್ಯಾರ್ಥಿಗಳು ಸ್ಥಳೀಯವಾಗಿರುವ ದೊಡ್ಡ ಆಲದಮರ ಕೆ.ಮಲ್ಲಣ್ಣ ಸ್ಮಾರಕ ಪ.ಪೂ. ಕಾಲೇಜಿಗೆ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಪಡೆಯಿರಿ. ಇದರಿಂದ ಹೊರಗಿನ ಶಾಲೆಗಳಿಗೆ ದಾಖಲಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಮತ್ತು ಮಾನಸಿಕ ಒತ್ತಡದಿಂದ ದೂರ ಇದ್ದು, ತಂದೆ ತಾಯಿಗಳ ಆಶೋತ್ತರಗಳನ್ನು ಈಡೇರಿಸಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.