ಧಾರವಾಡ:

ಆರೋಗ್ಯಯುತ ಜೀವನ ನಡೆಸಲು ಸುತ್ತಲಿನ ಪರಿಸರ ಉತ್ತಮವಾಗಿರಬೇಕು. ಅದಕ್ಕಾಗಿ ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಕ್ಲಬ್‌ಗಳು ಇತ್ತೀಚೆಗೆ ಪರಿಸರ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡುತ್ತಿವೆ ಎಂದು ಹಿರಿಯ ನ್ಯಾಯವಾದಿ ಕೆ.ಎಲ್‌. ಪಾಟೀಲ ಹೇಳಿದರು.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರೋಟರಿ ಕ್ಲಬ್‌ ಆಪ್‌ ಬೇಲೂರು-ಧಾರವಾಡ ಮಂಗಳವಾರ ಆಯೋಜಿಸಿದ್ದ ವನಮಹೋತ್ಸವದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೋಟರಿ ಕ್ಲಬ್‌ ಆಪ್‌ ಬೇಲೂರು ಮಾದರಿ ಕಾರ್ಯ ಮಾಡುತ್ತಿದೆ. ನೆಟ್ಟ ಸಸಿಗಳನ್ನು ಸರಿಯಾಗಿ ಪೋಷಣೆ ಮಾಡುವ ಮೂಲಕ ಬೇಲೂರು ಕೈಗಾರಿಕಾ ಪ್ರದೇಶವನ್ನು ಹಚ್ಚ ಹಸಿರಿನ ಪ್ರದೇಶವಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಲಬ್‌ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ ಹಾಗೂ ಕಾರ್ಯದರ್ಶಿ ಸಂದೀಪ ಹೊನ್ನಾವರ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಒಳಗೊಂಡ ರೋಟರಿ ಡಿಸ್ಟ್ರಿಕ್ಟ್‌ ವತಿಯಿಂದ ಒಂದು ವರ್ಷದ ಅವಧಿಯಲ್ಲಿ ಒಂದು ಮಿಲಿಯನ್‌ ಸಸಿ ನೆಡುವುದಾಗಿ ಗುರಿ ಇಟ್ಟುಕೊಳ್ಳಲಾಗಿದೆ. ಅದರಂಗವಾಗಿ ನಮ್ಮ ಕ್ಲಬ್‌ ಪ್ರಸ್ತುತ 350 ಸಸಿ ನೆಡಲಾಗಿದೆ. ತರಹೇವಾರಿ ಸಸಿಗಳ ಮೂಲಕ ಬೇಲೂರು ಕೈಗಾರಿಕಾ ಪ್ರದೇಶದ ವಿವಿಧೆಡೆ ಈ ಸಸಿಗಳನ್ನು ನೆಡಲಾಗಿದ್ದು ಇಂತಹ ಹಲವು ಕಾರ್ಯಕ್ರಮಗಳನ್ನು ಕ್ಲಬ್‌ ಹಮ್ಮಿಕೊಂಡಿದೆ ಎಂದರು.

ನಿವೃತ್ತ ನ್ಯಾಯಾಧೀಶ ರಾಮನಗೌಡ, ಕ್ಲಬ್‌ ಹಿರಿಯ ಸದಸ್ಯರಾದ ರವಿ ಹುಂಜೆ, ಶಿರಿಶ ಉಪ್ಪಿನ, ಆಶೋಕ ಸರದೇಸಾಯಿ, ಪ್ರಕಾಶಚಂದ್ರ ಇದ್ದರು. ಬೇಲೂರಿನ ಕೆರೆ ಸುತ್ತಮುತ್ತ, ಅಸೋಸಿಯೇಶನ್ ಆವರಣ, ಎನ್‌ಟಿಟಿಎಫ್‌ ಆವರಣದಲ್ಲಿ 350 ಸಸಿ ನೆಡಲಾಯಿತು. ವೀಯರ್‌ ಸ್ಟೀಲ್ಸ್‌ ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಮಹೇಶ ಹಿರೇಮಠ, ಸ್ನೇಹಾ ಕಾಂಬ್ಳಿ ಹಾಗೂ ಬೇಲೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಸಂಘದ ಸದಸ್ಯರು ಸಹ ಭಾಗವಹಿಸಿದ್ದರು.