ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರೈಲ್ವೆ ಇಲಾಖೆ ಇತ್ತೀಚಿಗೆ ಪರಿಚಯಿಸಿದ ಧಾರವಾಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಡುವಿನ "ವಂದೇ ಭಾರತ ಎಕ್ಸಪ್ರೆಸ್ ರೈಲು " ಯುವಕರು ಹಾಗೂ ಉದ್ಯೋಗಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿ ಹೊರ ಹೊಮ್ಮಿದ್ದು, ಅದರಲ್ಲೂ ನೌಕರಸ್ಥ ಯುವಕರಿಗೆ ಬಹುಬೇಡಿಕೆಯ ರೈಲಾಗಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಸೇ.62 ರಷ್ಟು ನೌಕರರು, ಉದ್ಯೋಗಿಗಳು ಅಂದರೆ 25 ರಿಂದ 59 ವಯೋಮಿತಿಯ ಜನರು ಸಂಚರಿಸುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಶೇ. 20ರಷ್ಟು 18-24 ಯುವಕರು, ಶೇ. 20ರಷ್ಟು 25-34 ವರ್ಷ ವಯಸ್ಸಿನ ಯುವಕರು ಹಾಗೂ ಶೇ. 30 ರಷ್ಟು 35-49 ವರ್ಷ ವಯಸ್ಸಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಯುವಕರು ಆಧ್ಯತೆಯ ಮೇರೆಗೆ ಇದೇ ರೈಲಿನಲ್ಲಿ ಸಂಚರಿಸುತ್ತಿರುವುದು ಸಹ ಕಂಡು ಬಂದಿದೆ.
ಅತ್ಯಂತ ಆರಾಮದಾಯಕವಾಗಿರುವ ವಂದೇ ಭಾರತ ರೈಲಿನಲ್ಲಿ 360- ಡಿಗ್ರಿ ತಿರುಗುವ (ರಿವಾಲ್ವಿಂಗ್) ಸೀಟ್ಗಳು, ಪ್ರತಿ ಸೀಟಿಗೆ ಟಚ್ ಆಧಾರಿತ ರೀಡಿಂಗ್ ಲೈಟ್ಗಳು, ಸ್ವಯಂಚಾಲಿತ ಪ್ಲಗ್ ಬಾಗಿಲುಗಳು, ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್ಗಳು, ಜಿಪಿಎಸ್ ಆಧಾರಿತ ಆಡಿಯೋ ವಿಷುವಲ್ ವ್ಯವಸ್ಥೆ, ಮನರಂಜನೆಗಾಗಿ ಆನ್ಬೋರ್ಡ್ ವೈಫೈ, ಆರಾಮದಾಯಕ ಸೀಟ್ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಉತ್ಕೃಷ್ಟ ಸಾರಿಗೆ ಗುಣಮಟ್ಟ ಮತ್ತು ಇತರ ಸೌಕರ್ಯಗಳಿಂದಾಗಿ ಜನಪ್ರಿಯವಾಗಿದೆ. ಇದಲ್ಲದೇ ತ್ವರಿತ ಪ್ರಯಾಣ ಹಾಗೂ ಸಮಯ ಉಳಿತಾಯ ಕೂಡ ಅನುಕೂಲಕರವಾಗಿದೆ ಎಂದು ವಂದೇ ಭಾರತ್ ರೈಲು ಪ್ರಯಾಣಿಕ ರಘುರಾಮ ಹೇಳುತ್ತಾರೆ.ಐಟಿ ರಾಜಧಾನಿ ಬೆಂಗಳೂರಿಗೆ ತ್ವರಿತವಾಗಿ ಸಂಪರ್ಕಿಸಲು ಈ ರೈಲು ಅವಕಾಶವಾಗಿ ಮಾರ್ಪಟ್ಟಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ರೈಲು ವೇಗವಾಗಿ ಸಂಚರಿಸುತ್ತಿದ್ದು, 1 ಗಂಟೆ ಬೇಗ ತಲುಪಲಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ ಎಂದು ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆನೀಶ ಹೆಗಡೆ ಹೇಳುತ್ತಾರೆ.
ಪ್ರಯಾಣಿಕರಿಗೆ ದಕ್ಷ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ನೈರುತ್ಯ ರೈಲ್ವೆ ಬದ್ಧವಾಗಿದೆ ಎಂದೂ ತಿಳಿಸಿದ್ದಾರೆ.ಈ ರೈಲು ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು, ಹುಬ್ಬಳ್ಳಿ, ದಾವಣಗೆರೆ, ಯಶವಂತಪುರ ನಿಲುಗಡೆಯಾಗಿ ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು 7.45ಗಂಟೆಗೆ ತಲುಪುತ್ತದೆ.