ಸಾರಾಂಶ
ಹೂವು, ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವು ತಾಲೂಕಿನಾದ್ಯಂತ ಸಂಭ್ರಮ ಸಡಗರಗಳಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಯಳಂದೂರು
ಹೂವು, ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವು ತಾಲೂಕಿನಾದ್ಯಂತ ಸಂಭ್ರಮ ಸಡಗರಗಳಿಂದ ನಡೆಯಿತು.ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಗಳಿಂದ ವರಮಹಾಲಕ್ಷ್ಮಿ ಕಳಶವನ್ನು ಪ್ರತಿಷ್ಠಾಪಿಸಿ ಅದಕ್ಕೆ ಹೊಸ ಸೀರೆ, ಚಿನ್ನ, ಬೆಳ್ಳಿ ಆಭರಣ, ಹೂವು, ಹಣ್ಣುಗಳಿಂದ ಸಿಂಗರಿಸಿದ್ದರು. ತುಪ್ಪದ ದೀಪಗಳು, ಧೂಪಗಳಿಂದ ವಿಶೇಷ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಗೋಚರಿಸುತ್ತಿತ್ತು. ಮನೆಮನೆಗೆ ಹೆಂಗಳೆಯರು ಹಾಗೂ ಮಕ್ಕಳು ಕುಂಕುಮ ವಿನಿಮಯ ಮಾಡಿಕೊಳ್ಳುತ್ತಿ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿತು. ತಟ್ಟದ ಬೆಲೆ ಏರಿಕೆ ಬಿಸಿ: ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿತ್ತು, ಆದರೂ ಕೂಡ ಭಕ್ತರ ಸಂಭ್ರಮಕ್ಕೆ ಇದು ಅಡ್ಡಿಯಾಗಲಿಲ್ಲ. ಕನಕಾಂಬರ ಕೆಜಿಗೆ ೧,೦೦೦ ರು. ರಿಂದ ೧೨೦೦ ರು. ಗೆ ಮಾರಾಟವಾದರೆ, ಬಟನ್ ಗುಲಾಬಿ ೪೦೦ ರು., ಮಲ್ಲಿಗೆ, ಕಾಕಡ ೫೦೦ ರು. ಗೆ ಮಾರಾಟವಾಯಿತು. ಸೇವಂತಿಗೆ ಹೂವು ಮೀಟರ್ಗೆ ೬೦ ರು. ಹಣ ನೀಡಿ ಭಕ್ತರು ಕೊಂಡುಕೊಂಡರು. ಇತ್ತ ಚೆಂಡು ಹೂವಿಗೂ ಭರ್ಜರಿ ವ್ಯಾಪಾರವಾಯಿತು. ಕೆಜಿ. ಹೂವಿಗೆ ೫೦ ರು. ಹಣ ನೀಡಿ ಜನರು ಖರೀದಿಗೆ ಮುಗಿಬಿದ್ದರು. ಸೇಬು ಕಿಲೋಗೆ ೧೮೦ ರು. ರಿಂದ ೨೦೦ ರು. ಗೆ ಮಾರಾಟವಾದರೆ, ದಾಳಿಂಬೆ ಕೆಜಿಗೆ ೮೦ ರು. ದ್ರಾಕ್ಷಿ ೧೫೦ ರು. ಏಲಕ್ಕಿ ಬಾಳೆಹಣ್ಣು ಕಿಲೋಗೆ ೭೦ರು.ಗೆ ಮಾರಾಟವಾಯಿತು. ಹೂವು, ಹಣ್ಣು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.ಮದ್ದೂರಿನಲ್ಲಿ ವರಮಹಾಲಕ್ಷ್ಮಿ ಸಂಭ್ರಮ: ತಾಲೂಕಿನ ಮದ್ದೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ನೂರಾರು ವರ್ಷಗಳ ಐತಿಹ್ಯ ಇರುವ ಮಹಾಲಕ್ಷ್ಮಿ ದೇಗುದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ದೇಗುಲವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಲಕ್ಷ್ಮಿ ಮೂರ್ತಿಯನ್ನು ವಿಶೇಷ ಹೂವುಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಅಭಿಷೇಕ ಸೇರಿದಂತೆ ವಿವಿಧ ಹೋಮ, ಹವನಗಳು ನಡೆದವು, ದೇಗುಲಕ್ಕೆ ಬೆಳಿಗಿನಿಂದಲೇ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ, ದೇವಿಯ ದರ್ಶನವನ್ನು ಪಡೆದುಕೊಂಡರು.