ಸಾರಾಂಶ
ಕೊಪ್ಪಳ: ಗವಿಸಿದ್ದೇಶ್ವರ ರಥೋತ್ಸವ ಪ್ರಯುಕ್ತ ನಾನಾ ಕಾರ್ಯಕ್ರಮಗಳು ಗವಿಮಠದಲ್ಲಿ ಆರಂಭವಾಗುತ್ತಿವೆ. ದಕ್ಷಿಣ ಭಾತರದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.ಕಾಯಕ ದೇವೋಭವ ಜಾಗೃತಿ ಜಾಥಾ: ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು ಎಂಬ ಘೋಷವಾಕ್ಯದೊಂದಿಗೆ ಜ.೨೪ರಂದು ಬೆಳಿಗ್ಗೆ ೮ ಗಂಟೆಗೆ ಸ್ವಯಂ ಉದ್ಯೋಗ ಹಾಗೂ ವೃತ್ತಿ ಕೌಶಲ್ಯದ ಸಂಕಲ್ಪ ಕಾಯಕ ದೇವೋಭವ ಜಾಗೃತಿ ಜಾಥಾ ಜಾಗೃತಿ ಅಭಿಯಾನ ಗವಿಮಠದಲ್ಲಿ ಜರುಗಲಿದೆ.ಕೊಪ್ಪಳದ ಬಾಲಕಿಯರ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರಿಂದ ಚಾಲನೆಗೊಳ್ಳಲಿದೆ. ನಂತರ ಜಾಥಾ ಆರಂಭವಾಗಿ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಮಠದ ಮಹಾದಾಸೋಹಕ್ಕೆ ತಲುಪಿ ಸಮಾರೋಪಗೊಳ್ಳಲಿದೆ.ತೆಪ್ಪೋತ್ಸವ: ಗವಿಮಠದ ಕೆರೆಯ ಆವರಣದಲ್ಲಿ ಜ.೨೪ರಂದು ಸಂಜೆ ೫ ಗಂಟೆಗೆ ತೆಪ್ಪೋತ್ಸವ, ಸಂಗೀತ ಕಾರ್ಯಕ್ರಮ ಜರುಗಲಿದೆ.ದಾಸೋಹ ಆರಂಭ: ಜಾತ್ರಾ ಮಹೋತ್ಸವದ ದಾಸೋಹದಲ್ಲಿ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್ನಲ್ಲಿರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಭವ್ಯ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಪ್ರಸಾದ ಸ್ವೀಕರಿಸಲು ಈ ಬಾರಿ ಇನ್ನೂ ಹೆಚ್ಚು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ.