ವರುಣಾರ್ಭಟ: ಹಣ್ಣು, ತರಕಾರಿ, ಹೂ ಬೆಳೆಗೆ ಹಾನಿ

| Published : Sep 20 2025, 01:00 AM IST

ಸಾರಾಂಶ

ಚಿಕ್ಕಬಳ್ಳಾಪುರ ನಗರದಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ನಗರದ ಬಜಾರ್ ರಸ್ತೆ,ಎಂಜಿ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 239 ರಲ್ಲಿ ರಸ್ತೆಗಳು ಕೆರೆ ಮತ್ತು ನದಿಗಳಾಗಿ ಮಾರ್ಪಟ್ಟಿದ್ದವು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ವಾಪಸಂದ್ರ- ಮಂಚನಬಲೆ ಸಂಪರ್ಕಿಸುವ ಕೆಳಸೇತುವೆ ಜಲಾವೃತಗೊಂಡಿತ್ತು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಕಳೆದ ಗುರುವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ದ್ರಾಕ್ಷಿ, ಹೂ ಸೇರಿದಂತೆ ಇನ್ನಿತರೆ ಬೆಳೆಗಳು ತೀವ್ರ ಹಾನಿಗೆ ಒಳಗಾಗಿವೆ.

ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ನಾಲ್ಕು ಗಂಟೆಯ ವೇಳೆಗೆ ನಗರ ಮತ್ತು ಗ್ರಾಮಾಂತರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿಯಿತು. ನಂತರ ರಾತ್ರಿ ಸುಮಾರು 8 ಗಂಟೆಯ ನಂತರ ರಾತ್ರಿಯಿಡಿ ಬಿಟ್ಟು, ಬಿಟ್ಟು ಬಾರಿ ಮಳೆ ಸುರಿಯಿತು. ಇದರಿಂದ ನಗರದ ಕೆಲವು ಬಡಾವಣೆಗಳು, ರಸ್ತೆಗಳು, ಹೊಲ,ಗದ್ದೆ,ತೋಟಗಳು ಜಲಾವೃತಗೊಂಡಿವೆ.

ಕೆರೆಯಂತಾದ ರಸ್ತೆಗಳು

ನಗರದಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ನಗರದ ಬಜಾರ್ ರಸ್ತೆ,ಎಂಜಿ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 239 ರಲ್ಲಿ ರಸ್ತೆಗಳು ಕೆರೆ ಮತ್ತು ನದಿಗಳಾಗಿ ಮಾರ್ಪಟ್ಟಿದ್ದವು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ವಾಪಸಂದ್ರ- ಮಂಚನಬಲೆ ಸಂಪರ್ಕಿಸುವ ಕೆಳಸೇತುವೆ ಜಲಾವೃತಗೊಂಡು ಸುತ್ತಮುತ್ತಲಿನ ಅಂಗಡಿಗಳ ಒಳಗೆ ನೀರು ತುಂಬಿತು. ತುಂಬಿದ ನೀರನ್ನು ಹೊರ ಹಾಕಲಾಗದೆ, ಅಂಗಡಿ ಮುಂಗಟ್ಟು ತೆರೆಯಲಾಗದೆ ಚಡಪಡಿಸಿದರು.

ನಗರ ಪ್ರದೇಶದಲ್ಲಿ ರಾತ್ರಿ ಬಿದ್ದಂತಹ ಭಾರಿ ಮಳೆಯಿಂದ ವಾರ್ಡ್ ನಂ 6 ಈದ್ಗಾ ಮಸೀದಿ ಹಿಂಭಾಗದ ಪ್ರದೇಶದ ಮನೆಗಳಿಗೆ ಮಳೆ ನೀರು ಬಂದಿದೆ. ನೀರು ಸುಮಾರು 15 ಮನೆಗಳಿಗೆ ನೀರು ನುಗ್ಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇತ್ತ ಗಮನ ಹರಿಸುತ್ತಿಲ್ಲ. ಸುಮಾರು ದಿನಗಳಿಂದ ಚರಂಡಿಗಳನ್ನು ಸ್ವಚ್ಛತೆ ಮಾಡಿ ಅಂತ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ನಗರ ಸಭೆ ಸಿಬ್ಬಂಧಿಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡುವುದಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾಕ್ಷರಿಂದ ಕಾರ್ಯಾಚರಣೆ ನಗರಸಭಾ ಅಧ್ಯಕ್ಷ ಎ.ಗಜೇಂದ್ರ.ಉಪಾಧ್ಯಕ್ಷ ಜೆ.ನಾಗರಾಜು, ಆಯುಕ್ತ ಮನ್ಸೂರ್ ಆಲಿ, ಸಹಾಯಕ ಪರಿಸರ ಅಭಿಯಂತರ ಉಮಾ ಶಂಕರ್ ಮತ್ತು ಸಿಬ್ಬಂದಿ ನಗರದಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಜೆಸಿಬಿಯೊಂದಿಗೆ ತೆರಳಿ ನೀಡಿ ರಸ್ತೆಗಳ ಮೇಲೆ ಹರಿಯುತ್ತಿದ್ದ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹರಸಾಹಸ ಪಟ್ಟರು. ಮನೆಗಳಲ್ಲಿ ನೀರು ತುಂಬಿರುವುದನ್ನು ಹೊರ ಹಾಕುವುದಕ್ಕೆ ಮತ್ತು ಚರಂಡಿಗಳನ್ನು ಸ್ವಚ್ಛತೆ ಮಾಡುವುದಕ್ಕೆ ಪೌರಕಾರ್ಮಿಕರಿಗೆ ಸೂಚನೆ ನೀಡಿದರು.

ಹಣ್ಣು, ತರಕಾರಿ, ಹೂ ಬೆಳೆಗೆ ಹಾನಿ

ಇನ್ನು ರೈತರ ಸ್ಥಿತಿ ಕೇಳುವ ಹಾಗೆ ಇಲ್ಲ. ದ್ರಾಕ್ಷಿ, ಹೂ, ತರಕಾರಿ ಹಣ್ನೀನ ತೋಟಗಳಲ್ಲಿ ನೀರು ತುಂಬಿದ್ದು, ತೋಟಗಳಲ್ಲಿನ ನೀರು ಹೊರ ಹೋಗದೆ ಸಂಕಷ್ಟಕೀಡಾದರು. ಕೆಲವರ ತರಕಾರಿ ಸೊಪ್ಪುಗಳ, ಹೂ ಮತ್ತು ಆಲೂಗದ್ದೆ ತೋಟಗಳ ಬೆಳೆಗಳಿಗೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮತ್ತೂಂದೆಡೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಸಣ್ಣ ಪುಟ್ಟ ಕೆರೆಗಳು, ಕುಂಟೆಗಳು ಮತ್ತು ಚೆಕ್‌ ಡ್ಯಾಂಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ರೈತರು ಮತ್ತು ಜಿಲ್ಲೆಯ ಜನತೆ ಕೆರೆ, ಕುಂಟೆಗಳಿಗೆ ನೀರು ಬರುತ್ತಿ ಇದರಿಂದ ಅಂತರ್ಜಲಮಟ್ಟ ಅಭಿವೃದ್ಧಿಯಾಗಲಿದೆ ಎಂದು ಸಂತಸಗೊಡಿದ್ದಾರೆ.

ಸೇರುತ್ತಿರುವ ಮನೆಗಳು

ಮಳೆ ಆರ್ಭಟದಿಂದಾಗಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ ಇನ್ನೂ ಒಳ್ಳೆಯ ಮನೆಗಳು ಸಹ ಜಡಿ ಮತ್ತು ಧಾರಾಕಾರ ಮಳೆಯಿಂದ ಸುರಿಯಲು ಆರಂಭಿಸಿವೆ. ಇದರಿಂದ ನಾಗರಿಕರು ಆತಂಕಗೊಂಡಿದ್ದಾರೆ.