ಭಾರಿ ಮಳೆಯಿಂದಾಗಿ ಕುಸ್ತಿ ಅಖಾಡವು ಕೆಸರು ಗದ್ದೆಯಾಯಿತು. ಮಳೆ ಹಾಗೂ ಗಾಳಿಯ ಪರಿಣಾಮ ಪಂದ್ಯಗಳನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.

ಧಾರವಾಡ:

ನಗರದ ಐತಿಹಾಸಿಕ ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ಶನಿವಾರ ಸಂಜೆ ಅತ್ಯಂತ ರೋಚಕ ಹಂತ ತಲುಪಿದ್ದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ವರುಣ ದಿಢೀರ್ ಆಗಮನದ ಮೂಲಕ ಅಡ್ಡಿಪಡಿಸಿದನು. ಭಾರಿ ಮಳೆಯಿಂದಾಗಿ ಕುಸ್ತಿ ಅಖಾಡವು ಕೆಸರು ಗದ್ದೆಯಾಯಿತು. ಮಳೆ ಹಾಗೂ ಗಾಳಿಯ ಪರಿಣಾಮ ಪಂದ್ಯಗಳನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.ಅನಿರೀಕ್ಷಿತ ಮಳೆ:

ಶನಿವಾರ ಸಂಜೆ 6.30ರ ಸುಮಾರಿಗೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಇದರಿಂದಾಗಿ ಮೈದಾನದಲ್ಲಿದ್ದ ಸಾವಿರಾರು ಕುಸ್ತಿ ಅಭಿಮಾನಿಗಳು ಅಕ್ಷರಶಃ ಮಳೆಯಲ್ಲಿ ನೆನೆದರು. ಈ ಸಮಯದಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ ವೇದಿಕೆಯಲ್ಲಿ ಆಗತಾನೇ ಮಾತು ಆರಂಭಿಸಿದ್ದರು. ಅವರು ಸೇರಿದಂತೆ ವೇದಿಕೆ ಮೇಲಿನ ಗಣ್ಯರು ಮಳೆಯಿಂದ ರಕ್ಷಣೆ ಪಡೆಯಲು ಓಡಾಡಬೇಕಾಯಿತು. ಕುಸ್ತಿಗಾಗಿ ಸಿದ್ಧಪಡಿಸಲಾಗಿದ್ದ ಮಣ್ಣಿನ ಅಖಾಡವು ಮಳೆಯ ನೀರಿನಿಂದಾಗಿ ಸಂಪೂರ್ಣ ಕೆಸರಾಯಿತು. ಪೈಲ್ವಾನರು ಪಟ್ಟುಗಳನ್ನು ಹಾಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು.ಪ್ರೇಕ್ಷಕರ ಪರದಾಟ:ಕುಸ್ತಿ ನೋಡಲು ಮೈದಾನದ ಗ್ಯಾಲರಿ ಹಾಗೂ ಸುತ್ತಮುತ್ತ ನೆರೆದಿದ್ದ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಗಿಡಗಳ ಕೆಳಗೆ ಹಾಗೂ ಕಟ್ಟಡಗಳ ಆಶ್ರಯ ಪಡೆಯಲು ಓಡಾಡಿದರು.ಅಭಿಮಾನಿಗಳ ನಿರಾಸೆ:ಬಹಳ ದಿನಗಳ ನಂತರ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ನಡೆಯುತ್ತಿದೆ ಎಂದು ಕಾತರದಿಂದ ಕಾಯುತ್ತಿದ್ದ ಕುಸ್ತಿ ಪ್ರೇಮಿಗಳಿಗೆ ಮಳೆರಾಯ ತಣ್ಣೀರೆರಚಿದಂತಾಯಿತು. ಮಳೆ ನಿಂತ ನಂತರವೂ ಮೈದಾನ ಹಸಿಯಾಗಿದ್ದರಿಂದ ಪಂದ್ಯಾವಳಿಯ ಅಂತಿಮ ಹಂತದ ರೋಚಕತೆ ಕುಂದಿತು.ಪ್ರಮುಖ ಪಂದ್ಯಗಳು ಸ್ಥಗಿತ!

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮನ್ಸುಖ್ ಮಾಂಡವಿಯಾ ಅವರ ಸಮ್ಮುಖದಲ್ಲಿ ಇರಾನಿನ ಮಿರ್ಜಾ ಮತ್ತು ನೇಪಾಳದ ದೇವಿ ತಾಪಾ ಅಂತಹ ಘಟಾನುಘಟಿ ಪೈಲ್ವಾನರ ನಡುವಿನ ಹೈ-ವೋಲ್ಟೇಜ್ ಪಂದ್ಯಗಳು ನಡೆಯಬೇಕಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಅಖಾಡವು ಜಾರುತ್ತಿದ್ದ ಕಾರಣ ಪೈಲ್ವಾನರ ಸುರಕ್ಷತೆಯ ದೃಷ್ಟಿಯಿಂದ ಸಂಘಟಕರು ಕುಸ್ತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು.