ರಾಮನಗರ: ಮೇಕೆದಾಟು ಯೋಜನೆ ಶ್ರೀಘ್ರ ಜಾರಿಗೆ ಮಾಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪುಬಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು

ರಾಮನಗರ: ಮೇಕೆದಾಟು ಯೋಜನೆ ಶ್ರೀಘ್ರ ಜಾರಿಗೆ ಮಾಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪುಬಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ವಾಟಾಳ್ ನಾಗರಾಜು ಹಾಗೂ ಕಾರ್ಯಕರ್ತರು ಕಪ್ಪುಬಟ್ಟೆ ಹಿಡಿದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಘೋಷಣೆ ಕೂಗಿದರಲ್ಲದೆ ಶೀಘ್ರದಲ್ಲಿಯೇ ಮೇಕೆದಾಟು ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಟಿವಿಕೆ ಮೈತ್ರಿ ಆಗಿದೆ. ಹೀಗಾಗಿ ಮೇಕೆದಾಟು ವಿಚಾರದಲ್ಲಿ ವಿಜಯ್ ಗೋಸ್ಕರ ರಾಜ್ಯ ಸರ್ಕಾರ ಸೈಲೆಂಟ್ ಆಗಿದೆ. ಡಿಕೆಶಿ ಕೂಡಲೇ ಮೇಕೆದಾಟು ಯೋಜನೆ ಪ್ರಕ್ರಿಯೆ ಆರಂಭಿಸಬೇಕು, ಇಲ್ಲ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಗೆ ಕೂಡಲೇ ಹಣ ಮೀಸಲಿಡಬೇಕು. ಮೇಕೆದಾಟು ಆಗುವವರೆಗೂ ಹೋರಾಟ ಮುಂದುವರೆಸುತ್ತೇವೆ. ಮುಂದಿನ ವಾರದಲ್ಲಿ ತಮಿಳುನಾಡು-ಕರ್ನಾಟಕ ಗಡಿ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್,ಮುಖಂಡರಾದ ವಿ.ಎನ್.ಗಂಗಾಧರ್ , ಸಿ. ಎಸ್ ಜಯಕುಮಾರ್ , ಲಕ್ಷ್ಮಿ, ಕೆ ಜಯರಾಮ, ಕೆಂಪರಾಜು, ಪುಷ್ಪಲತಾ, ಸಿ.ಎಂ.ವಿಜಯ್ ಕುಮಾರ್

ಕರುನಾಡ ಕುಮಾರ್, ವೆಂಕಟಲಕ್ಷಿ. ಗಿರೀಶ್ ಗೌಡ, ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.

ನೆಹರು ಅವರೊಂದಿಗೆ ಮೋದಿನ ಹೋಳಿಸಲು ಸಾಧ್ಯವೇ ಇಲ್ಲ - ವಾಟಾಳ್ ನಾಗರಾಜ್

ರಾಮನಗರ: ಈ ದೇಶಕ್ಕೆ ಹೊಸ ಶಕ್ತಿ ನೀಡಿ ವಿಶ್ವಕ್ಕೆ ಭಾರತವನ್ನು ಪರಿಚಯ ಮಾಡಿಸಿದ ನೆಹರು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಸಲು ಸಾಧ್ಯವೇ ಇಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂದಿನ ಪ್ರಧಾನಿ ನೆಹರು ಅವರ ಆಡಳಿತವನ್ನು ನಡೆಸಿದ ದಿನವನ್ನು ನಾವು ಸರಿಗಟ್ಟಿದ್ದೇವೆ ಬಿಜೆಪಿ ಅವರು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಮೋದಿ ಬಗ್ಗೆ ನನಗೆ ವಿರೋಧ ಇಲ್ಲ. ಆದರೆ, ಮೋದಿಯನ್ನು ನೆಹರು ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದರು.

ನೆಹರು ಅವರು 11 ವರ್ಷ ಜೈಲಿನಲ್ಲಿದ್ದರು. ಇದು ಸಾಮಾನ್ಯ ವಿಚಾರವಲ್ಲ. ಬಸವಣ್ಣ ಮತ್ತು ನೆಹರು ಅವರಿಗೆ ಮೋದಿ ಸಮವಲ್ಲ. ಇದನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅವರು ತಿಳಿದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಹರು ಅವರು ಮೋದಿ ರೀತಿ ಎಂದೂ ವರ್ತಿಸಿದವರಲ್ಲ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೆಳಗಿಳಿಸಲು ನೇರವಾಗಿ ಪ್ರಧಾನ ಮಂತ್ರಿಯೇ ಬೀದಿಗೆ ಬಂದರು. ಈ ರೀತಿ ನೆಹರು ಅವರು ಕೆಲಸ ಮಾಡಿಲಿಲ್ಲ.ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜತ್ತಿ ಮೇಲೆ ಆರೋಪ ಕೇಳಿಬಂದಾಗ ನೇರವಾಗಿ ರಾಜ್ಯಕ್ಕೆ ಆಗಮಿಸಿದ ನೆಹರು ರಾಜಭವನದಲ್ಲಿ ಕುಳಿತು ಎಲ್ಲವರನ್ನು ಪರಿಶೀಲನೆ ಮಾಡಿ, ಜತ್ತಿಯ ಮೇಲಿದ್ದ ಆರೋಪವನ್ನು ತಳ್ಳಿ ಹಾಕಿದ್ದರು.

ಅಂದಿನ ಕಾಲದಲ್ಲಿದ್ದ ಎಲ್ಲರೂ ಸತ್ಯವಂತರಾಗಿದ್ದರು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಸೇರಿದಂತೆ ಎಲ್ಲರೂ ಒಳ್ಳೆಯವರೇ. ಆದರೆ ನರೇಂದ್ರ ಮೋದಿ ಅವರು ರಾಜ್ಯ ರಾಜ್ಯಗಳಿಗೆ ತೊಂದರೆ ಕೊಟ್ಟು, ಹಿಂಸೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಹೋಗಿ ಮಾಡದ ಎಲ್ಲಾ ಸಹಾಸ ಮಾಡಿದ್ದರು. ಆ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾಮಲೈ ಅವರನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡಿದರು. ಪ್ರಧಾನ ಮಂತ್ರಿ ಆದವರಿಗೆ ಗಾಂಭೀರ್ಯ ಇರಬೇಕು. ಅದು ಮೋದಿ ಅವರಲ್ಲಿ ಕಾಣುತ್ತಿಲ್ಲ ಎಂದರು.

ಮಹಾತ್ಮಾ ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರ ಹೋಲಿಕೆಯನ್ನು ಯಾರು ಯಾರಿಗೂ ಮಾಡಬಾರದು. ಇದು ಅಪರಾಧವಾಗಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

10ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.