ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮಾದಾರ ಗುರು ಪೀಠಕ್ಕೆ ನೂತನವಾಗಿ ನೇಮಕಗೊಂಡಿರುವ ವಟು ಜಯಬಸವ ಸ್ವಾಮೀಜಿ ಶನಿವಾರ ಬಸವ ಕೇಂದ್ರ ಮುರುಘಾ ಮಠಕ್ಕೆ ಭೇಟಿ ನೀಡಿ ಕತೃ ಗದ್ದುಗೆಗೆ ನಮಿಸಿದರು. ಈ ವೇಳೆ ಮಾತನಾಡಿದ ಎಸ್ಜೆಎಂ ಆಡಳಿತ ಮಂಡಳಿ ನಿರ್ದೇಶಕ ಡಾ.ಬಸವಕುಮಾರ ಸ್ವಾಮೀಜಿ, ಬಸವಣ್ಣನವರ ಸದಾಶಯ ಸರ್ವ ಸಮಾನತೆ ತರುವಂಥ ಕನಸು. ಅದು ಕಲ್ಯಾಣ ರಾಜ್ಯ ನಿರ್ಮಾಣದ ಆಶಯವೂ ಆಗಿತ್ತು. ಅದರಂತೆ ಅಂತಹ ಕಾರ್ಯವು ಅಂದಿನ ಅನುಭವ ಮಂಟಪದ ಮೂಲಕ ಸಾಕಾರಗೊಂಡಿತು. ಶೂನ್ಯ ಪೀಠದ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಪೀಠ ಪ್ರಾರಂಭವಾದಾಗಿನಿಂದ ಕಲ್ಯಾಣ ಶರಣರ ಆಶಯ ಮತ್ತು ಮೌಲ್ಯ ಅನುಷ್ಠಾನ್ಕಕೆ ತರುವ ಕಾರ್ಯ ಮಾಡುತ್ತಾ ಬಂದಿದೆ. ಬೃಹನ್ಮಠವು ತಳ ಸಮುದಾಯದ ಅಭಿವೃದ್ಧಿಗೆ ಧಾರ್ಮಿಕ ಸ್ವಾತಂತ್ರ್ಯನೀಡಬೇಕೆಂಬ ಸದುದ್ದೇಶದಿಂದ ನಿಮ್ನ ವರ್ಗದ ಯುವಕ ಯುವತಿಯರಿಗೆ ಧಾರ್ಮಿಕ ಮತ್ತು ಸಮಾಜ ಸೇವಾ ಧೀಕ್ಷೆ ನೀಡಿ ಅವರಿಗೆ ಬಸವ ತತ್ವ ಮತ್ತು ಜಾಗತಿಕ ಧರ್ಮಗಳ ಅಧ್ಯಯನ ಕಾರ್ಯದಲ್ಲಿ ಮಗ್ನವಾಗಿದೆ. ಆ ಮಾರ್ಗದಲ್ಲಿ ಬರುವ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠವೂ ಒಂದು. ಕಳೆದ ಎರಡ್ಮೂರು ದಶಕಗಳ ಹಿಂದೆ ಇಲ್ಲಿನ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಶ್ರೀಮಠದಲ್ಲಿ ಧಾರ್ಮಿಕ ದೀಕ್ಷೆ ಪಡೆದು ಆ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದಿದ್ದಾರೆ. ಅಂತಹ ಶ್ರೀಗಳು ತಮ್ಮ ಗುರುಪೀಠದ ಮೂಲಕ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡು ಬಾಲಕನೋರ್ವನನ್ನು ಐತಿಹಾಸಿಕ ದಿನ ಬಸವ ಜಯಂತಿ ಸುಸಂದರ್ಭದಲ್ಲಿ ವಟುವಾಗಿ ಸ್ವೀಕರಿಸಿರುವುದು ಸಂತಸದ ಸಂಗತಿ ಎಂದರು.
ಈ ವೇಳೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ, ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಭಕ್ತರು, ಬಸವಾಭಿಮಾನಿಗಳು ಉಪಸ್ಥಿತರಿದ್ದರು.