ಕಾಯ್ಕಿಣಿ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆದ ವಿಬಿಜಿ-ರಾಮ್ ಜಿ ಮಾಹಿತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಭಟ್ಕಳಪ್ರತಿಯೊಂದು ಗ್ರಾಮದಲ್ಲಿ ಉದ್ಯೋಗ, ಕುಟುಂಬದಲ್ಲಿ ಆದಾಯ ಭದ್ರತೆ, ಹೊಲಕ್ಕೆ ನೀರು, ಉತ್ತಮ ಮೂಲಸೌಕರ್ಯ ಹಾಗೂ ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಗೌರವ-ಇವುಗಳ ಸಮನ್ವಯವೇ ನಿಜವಾದ ಅಭಿವೃದ್ಧಿ. ಈ ಆಶಯವನ್ನು ಸಾಕಾರಗೊಳಿಸುವಲ್ಲಿ ವಿಬಿಜಿ-ರಾಮ್ ಜಿ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಕಾಯ್ಕಿಣಿ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಾಪಂ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಹೇಳಿದರು.
ಕಾಯ್ಕಿಣಿ ಪಂಚಾಯಿತಿ ಸಭಾಭವನದಲ್ಲಿ ನಡೆದ ವಿಬಿಜಿ-ರಾಮ್ ಜಿ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಭಿವೃದ್ಧಿ ಅಧಿಕಾರಿ ನಾಗರಾಜ ಮಾತನಾಡಿ, ವಿಬಿಜಿ-ರಾಮ್ ಜಿ ಯೋಜನೆಯ ಮಹತ್ವ ಉದ್ಯೋಗವನ್ನು ಗ್ರಾಮೀಣ ಅಭಿವೃದ್ಧಿಯೊಂದಿಗೆ ಜೋಡಿಸುವ ಪ್ರಯತ್ನದಲ್ಲಿದೆ. ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಿಸಲು ಜನಸಮುದಾಯ ಕೈಜೋಡಿಸುವ ಅಗತ್ಯವಿದೆ ಎಂದರು.
ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಮಾತನಾಡಿ, ವಿಬಿಜಿ- ರಾಮ್ ಜಿ ಕೇವಲ ಕೆಲಸ ನೀಡುವ ಯೋಜನೆಯಾಗಿ ಉಳಿಯದೆ, ಕೆಲಸದ ಮೂಲಕ ಗ್ರಾಮ ನಿರ್ಮಾಣ ಮಾಡುವ ಯೋಜನೆಯಾಗಬೇಕು. ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸಾಧಿಸಲು ಸಾಮಾಜಿಕ ಪರಿಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪಂಚಾಯಿತಿ ಕಾರ್ಯದರ್ಶಿ ಈರಪ್ಪ ಬೇವಿನಗಿಡ ಸ್ವಾಗತಿಸಿದರು. ವಿಷ್ಣು ನಾಯ್ಕ ವಂದಿಸಿದರು. ಪಂಚಾಯಿತಿ ಸಿಬ್ಬಂದಿ ನಾಗವೇಣಿ ನಾಯ್ಕ, ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ, ಕೇಶವ ನಾಯ್ಕ ಹಾಗೂ ಸುಮ ನಾಯ್ಕ ಸಹಕರಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ ನಾಯ್ಕ ಹಾಗೂ ಶಿಲ್ಪಾ ನಾಯ್ಕ ಉಪಸ್ಥಿತರಿದ್ದರು.
ಯಶಸ್ವಿಯಾಗಿ ನಡೆದ ಕಾರ್ಯಾಗಾರದಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.