ಕೃತಕ ಬುದ್ಧಿಮತ್ತೆ ತಂತ್ರಾಶ ಕಲಿಕೆ ಕಾರ್ಯಾಗಾರ । ಪುಣೆಯ ಗೇಟ್ ಟ್ಯೂಟರ್ ಸಂಸ್ಥೆ ಅಭಿವೃದ್ಧಿಪಡಿಸಿ ತಂತ್ರಾಂಶದ ಮಾಹಿತಿ
ಕನ್ನಡಪ್ರಭ ವಾರ್ತೆ ಹಳಿಯಾಳ
ಆಧುನಿಕ ತಂತ್ರಜ್ಞಾನ ಮತ್ತು ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಹಳಿಯಾಳದ ವಿ.ಡಿ.ಐ.ಟಿ. ಕಾಲೇಜು ಮುಂಚೂಣಿಯಲ್ಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಹೇಳಿದರು.
ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿ.ಡಿ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ತಂತ್ರಾಂಶ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪುಣೆಯ ಗೇಟ್ ಟ್ಯೂಟರ್ ಸಂಸ್ಥೆಯು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ವಿ.ಡಿ.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಈ ತಂತ್ರಾಂಶವು ಉಚಿತವಾಗಿ ದೊರೆಯಲಿದೆ. ಈ ತಂತ್ರಾಂಶವು ಪ್ರಾಧ್ಯಾಪಕರಿಗೆ ತಮ್ಮ ಬೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಎಐ ಆಧಾರಿತ ಕಲಿಕೆ, ಮೌಲ್ಯಮಾಪನ ಮತ್ತು ಉದ್ಯೋಗಾರ್ಹತೆಯನ್ನು ಈ ತಂತ್ರಾಂಶದ ಮೂಲಕ ಹೇಗೆ ಹೆಚ್ಚಿಸಬಹುದೆಂಬುದರ ಬಗ್ಗೆ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ತಾವು ಕಲಿತ ವಿಷಯಗಳನ್ನು ಮತ್ತೆ ಪುನರ-ಮನನ ಮಾಡಿಕೊಳ್ಳುವುದು, ಎಐ ಆಧಾರಿತ ಪರೀಕ್ಷೆ, ಫಲಿತಾಂಶ ವಿಶ್ಲೇಷಣೆ ಸೇರಿದಂತೆ ಕಾರ್ಪೊರೇಟ್ ವಲಯಕ್ಕೆ ಸೇರಲು ಬೇಕಾಗುವ ಕೌಶಲ್ಯ ಅಭಿವೃದ್ಧಿ ಇತ್ಯಾದಿ ಕುರಿತು ತರಬೇತಿಯಲ್ಲಿ ಸಮಗ್ರ ಮಾಹಿತಿ ನೀಡಲಾಯಿತು.ಪ್ರಥಮ ಹಂತದ ತರಬೇತಿ ಕಾರ್ಯಾಗಾರದಲ್ಲಿ ಕಾಲೇಜಿನ ಇಪ್ಪತ್ತಕ್ಕೂ ಹೆಚ್ಚು ಪ್ರಾಧ್ಯಾಪಕರು ಪಾಲ್ಗೊಂಡು ತಮ್ಮ ಕೌಶಲ್ಯ ವೃದ್ಧಿಸಿಕೊಂಡರು. ಪುಣೆಯ ಗೇಟ್ ಟ್ಯೂಟರ್ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಬೋರಿಗದ್ದೆ ತರಬೇತಿ ನೀಡಿದರು.
ಐ.ಇ.ಇ.ಇ. ವಿದ್ಯಾರ್ಥಿ ಘಟಕ, ವಿದ್ಯುತ್ ವಿಭಾಗ ಮತ್ತು ಐಕ್ಯೂಎಸಿ ವಿಭಾಗವು ಜಂಟಿಯಾಗಿ ಈ ಕಾರ್ಯಾಗಾರ ಆಯೋಜಿಸಿದ್ದವು. ಪ್ರೊ. ಪ್ರಕಾಶ ಚವ್ಹಾಣ ಮತ್ತು ಪ್ರೊ. ನವೀನ ಹಿರೇಮಠ ಕಾರ್ಯಗಾರ ಸಂಯೋಜಿಸಿದರು.