ಮಂಗಳೂರು: ನಗರದ ಬಿಜೈ ನ್ಯೂರೋಡ್, ಬಟ್ಟಗುಡ್ಡೆ, ಕದ್ರಿ, ಚಿಲಿಂಬಿ ಸೇರಿದಂತೆ ಕೆಲವು ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗಿದ್ದರಿಂದ ಹಲವು ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿರುವ ಆರೋಪ ವ್ಯಕ್ತವಾಗಿದೆ.

ಮಂಗಳೂರು: ನಗರದ ಬಿಜೈ ನ್ಯೂರೋಡ್, ಬಟ್ಟಗುಡ್ಡೆ, ಕದ್ರಿ, ಚಿಲಿಂಬಿ ಸೇರಿದಂತೆ ಕೆಲವು ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗಿದ್ದರಿಂದ ಹಲವು ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿರುವ ಆರೋಪ ವ್ಯಕ್ತವಾಗಿದೆ.

ಘಟನೆ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರಾಜ್ಯ ಕಾಂಗ್ರೆಸ್ ನೇತೃತ್ವದ ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶಗಳ ಬಹುತೇಕ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ, ನೀಲಿ ಬಣ್ಣದಿಂದ ಕೂಡಿದ ವಾಸನೆ ಮಿಶ್ರಿತ ನೀರು ಸರಬರಾಜಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಈ ನೀರನ್ನು ಕುಡಿದ ನಾಗರಿಕರಲ್ಲಿ ವಾಂತಿ, ಜ್ವರ, ಭೇದಿ, ಸಹಿಸಲು ಆಗದ ಸುಸ್ತು ಸೇರಿದಂತೆ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಪಂಪ್‌ವೆಲ್ ಬಯೋಟೆಕ್ ಲ್ಯಾಬೋರೇಟರಿ ಹಾಗೂ ಬಿಜೈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಿದ ಪರೀಕ್ಷೆಯ ನಂತರ ಈ ನೀರು ಕುಡಿಯಲು ಯೋಗ್ಯ ಅಲ್ಲ ಎಂಬ ವರದಿ ಬಂದಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ಸಿಗದಂತೆ ಅಧಿಕಾರಿಗಳು ಪ್ರಯತ್ನಿಸಿದ್ದು ಯಾಕೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಸರ್ಕಾರದ, ಪಾಲಿಕೆಯ ಬೇಜವಾಬ್ದಾರಿಗೆ ಜನರು ತೊಂದರೆ ಅನುಭವಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಇದರ ಹಿಂದಿನ ಕಾರಣ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರು ಈಗಾಗಲೇ ತಮ್ಮ ಮನೆಯ, ಅಪಾರ್ಟ್‌ಮೆಂಟ್ ಗಳ ಟಾಂಕ್‌ನಲ್ಲಿನ ಕಲುಷಿತ ನೀರನ್ನು ಚೆಲ್ಲಿದ್ದು, ಕೂಡಲೇ ಅವರಿಗೆ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದರು.