ಅರಸೀಕೆರೆಯಲ್ಲಿ ವಿಜೃಂಭಣೆಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

| Published : May 13 2024, 12:01 AM IST

ಅರಸೀಕೆರೆಯಲ್ಲಿ ವಿಜೃಂಭಣೆಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ತಾಲೂಕಿನ ಸುಕ್ಷೇತ್ರ ಕಣಕಟ್ಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಹರಿಹರ, ಧಾರವಾಡ, ಹುಬ್ಬಳ್ಳಿ ಮಹಾನಗರಗಳು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿದರು.

ಜಾತ್ರೆ । ಕಣಕಟ್ಟೆ ಗ್ರಾಮದಲ್ಲಿನ ದೇವರು । ಸಾವಿರಾರು ಭಕ್ತರು ಭಾಗಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಣಕಟ್ಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ತಾಲೂಕಿನ ಸುಕ್ಷೇತ್ರ ಕಣಕಟ್ಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಹರಿಹರ, ಧಾರವಾಡ, ಹುಬ್ಬಳ್ಳಿ ಮಹಾನಗರಗಳು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಬಂದು ಪಾಲ್ಗೊಂಡು ಮಹಾರಥೋತ್ಸವದಲ್ಲಿ ತಮ್ಮ ಸೇವೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸುವುದು ಇಲ್ಲಿನ ಸಾಂಪ್ರದಾಯವಾಗಿ ಅನೇಕ ವರ್ಷಗಳಿಂದ ಬೆಳೆದು ಬಂದಿದೆ

ಧಾರ್ಮಿಕ ಕಾರ್ಯಗಳು ನೆರವೇರಿದ ನಂತರ ಕಣಕಟ್ಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾ ಮಂಗಳಾರತಿ, ಮುಡಿ ಸೇವೆ ಮತ್ತು ತೇರು ಮಂಟಪದ ಸೇವಾ ಕಾರ್ಯಕ್ರಮಗಳು ಸಂಪ್ರದಾಯದಂತೆ ಪೂರೈಸಿದ ಮೇಲೆ ಶ್ರೀ ಸ್ವಾಮಿಯನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ರಥದಲ್ಲಿ ಕುಳ್ಳಿರಿಸಿ ಭಕ್ತಿ ಭಾವದಿಂದ ಗ್ರಾಮ ದೇವತೆ ಶ್ರೀ ಕರಿಯಮ್ಮ, ಶ್ರೀ ಲಕ್ಷ್ಮೀ ನಾರಾಯಣ, ಶ್ರೀ ಚೌಡಮ್ಮ ಹಾಗು ಶ್ರೀ ಮೂರು ಕಣ್ಣು ಮಾರಮ್ಮ ದೇವಿಯರ ನೇತೃತ್ವದಲ್ಲಿ ಹರ್ಷೋದ್ಗಾರದಿಂದ ಹರಹರ ಮಹದೇವ್ ಘೋಷಣೆ ಕೂಗುತ್ತ ರಥವನ್ನು ಎಳೆಯುವ ಮೂಲಕ ಧನ್ಯತೆ ಮೆರೆದರು

ಈ ಸಂಧರ್ಭದಲ್ಲಿ ಭಾಗವಸಿದ್ದ ಸಂಖ್ಯೆಯಲ್ಲಿ ಭಕ್ತ ವೃಂದ ಮಹಾರಥದ ಕಳಶಕ್ಕೆ ದವನ ಮತ್ತು ಬಾಳೆಹಣ್ಣುಗಳನ್ನು ಎಸೆದು ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.