ಕನ್ನಡಪ್ರಭವಾರ್ತೆ ತಿಪಟೂರು
ಮಹನೀಯರುಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸರಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ರೇಣುಕಾಚಾರ್ಯ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವೀರಶೈವ ಧರ್ಮ ವಿಶಾಲವಾದುದು. ಇದು ಜಾತಿಗೆ ಸೀಮಿತವಾಗಿಲ್ಲ. ಅಂತಹ ವೀರಶೈವ ಧರ್ಮವನ್ನು ಸ್ಥಾಪಿಸಿ ಆಚರಣೆಗೆ ತಂದ ಮಹಾತ್ಮರು ರೇಣುಕಾಚಾರ್ಯರು ಎಂದು ತಿಳಿಸಿದರು.ಉಪನ್ಯಾಸ ನೀಡಿದ ರಂಗಪ್ಪ ರೇಣುಕಾಚಾರ್ಯರು ಆಂದ್ರಪ್ರದೇಶದ ಸೋಮೇಶ್ವರದಲ್ಲಿ ಈಶ್ವರಲಿಂಗದಲ್ಲಿ ಉದ್ಭವಗೊಂಡು ಪರಶಿವನ ಕೃಪೆಯಿಂದ ಜನಿಸಿದ ಮಹಾತ್ಮರು. ಸಮಾಜದ ಕಲ್ಯಾಣಕ್ಕಾಗಿ ರಾಜ್ಯದ ಬಾಳೆಹೊನ್ನೂರು ರಂಭಾಪುರಿ ಪೀಠವೂ ಸೇರಿದಂತೆ ದೇಶದ ೫ ಕಡೆಗಳಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರವನ್ನು ಕೈಗೊಂಡರು ಎಂದು ಸ್ಮರಿಸಿದರು.ಜಯದೇವ ವಿದ್ಯಾರ್ಥಿ ನಿಲಯದ ಬಸವರಾಜು ಮಾತನಾಡಿ ಎಲ್ಲ ಧರ್ಮದವರೂ ಗುರುಕುಲಕ್ಕೆ ಹೋಗಿ ವಿದ್ಯೆ ಕಲಿತರೆ, ರೇಣುಕರು ಶಿಷ್ಯರನ್ನು ಹುಡುಕಿಕೊಂಡು ಹೋಗಿ ಅಗಸ್ತ್ಯನಿಗೆ ಜ್ಞಾನಾರ್ಜನೆ ನೀಡಿ, ಶಿಷ್ಯನಿಗಾಗಿ ಸಿದ್ದಾಂತ ಶಿಖಾಮಣಿ ಗ್ರಂಥವನ್ನು ರಚಿಸಿದರು. ಎಲ್ಲ ಧರ್ಮಗಳಿಗೂ ಧರ್ಮಗುರುಗಳಿದ್ದ ಹಾಗೆ ನಮ್ಮ ಧರ್ಮಕ್ಕೂ ರೇಣುಕರು ಧರ್ಮಗುರುಗಳಾಗಿದ್ದಾರೆ ಎಂದು ತಿಳಿಸಿದರು.ಸಮಾರಂಭದಲ್ಲಿ ಗ್ರೇಡ್೨ ತಹಸೀಲ್ದಾರ್ ಜಗನ್ನಾಥ್, ವೀರಶೈವಾನಂದಾಶ್ರಮದ ಎಚ್. ಲೋಕೇಶ್, ಟ್ರಸ್ಟಿಗಳಾದ ಟಿ.ಎನ್.ಪರಮಶಿವಯ್ಯ, ಜಿ.ಕೆ.ನಟರಾಜು, ಮುಖಂಡರಾದ ಗಂಡಸಿ ಸುರೇಶ್, ಶಿವಾನಂದ್, ಮೋಹನ್, ವೋಡಾಫೋನ್ ಚಂದ್ರು, ರವಿ, ಪಟಾಕಿ ತೋಂಟಿ, ಮಲ್ಲಿಕಾರ್ಜುನ್ ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.