ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರಾಗಿ ವೀರಶೆಟ್ಟಿ ಖ್ಯಾಮಾ ಆಯ್ಕೆ

| Published : Jun 02 2025, 11:57 PM IST / Updated: Jun 02 2025, 11:58 PM IST

ಸಾರಾಂಶ

ವಿಶ್ವ ಹಿಂದು ಪರಿಷದ್‌ (ವಿಎಚ್‌ಪಿ) ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಹಿಂದುಪರ ಸಂಘಟನೆ ಯುವ ಮುಖಂಡ ವೀರಶೆಟ್ಟಿ ಖ್ಯಾಮಾ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ವಿಶ್ವ ಹಿಂದು ಪರಿಷದ್‌ (ವಿಎಚ್‌ಪಿ) ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಹಿಂದುಪರ ಸಂಘಟನೆ ಯುವ ಮುಖಂಡ ವೀರಶೆಟ್ಟಿ ಖ್ಯಾಮಾ ಅವರನ್ನು ನೇಮಕ ಮಾಡಲಾಗಿದೆ.

ಸೋಮವಾರ ನಗರದ ದೇವಿ ಕಾಲೋನಿಯ ದೇವಿ ಮಂದಿರ ಸಭಾಂಗಣದಲ್ಲಿ ಪರಿಷದ್‌ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ವಿಭಾಗ ಕಾರ್ಯದರ್ಶಿ ಅಂಬರೀಶ್‌ ಸುಲೇಗಾಂವ್ ನೇತೃತ್ವದಲ್ಲಿ ನಡೆದ‌ ಜಿಲ್ಲಾ ಪ್ರಮುಖ ಬೈಠಕ್ ನಲ್ಲಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ಈ ವೇಳೆ ಸರ್ವಸಮ್ಮತವಾಗಿ ವಿಎಚ್ ಪಿ ಜಿಲ್ಲಾ ಸಾರಥ್ಯವನ್ನು ವೀರಶೆಟ್ಟಿ ಖ್ಯಾಮಾ ಅವರ ಹೆಗಲಿಗೆ ವಹಿಸಲಾಯಿತು.

ಇದೇ ವೇಳೆ ಪರಿಷದ್‌ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಯುವ ಮುಖಂಡ ಸಂಗಮೇಶ ಗಾದಗಿ ಅವರನ್ನು ನೇಮಿಸಲಾಯಿತು.‌ ರಮೇಶ ಕುಲಕರ್ಣಿ ಅವರಿಗೆ ಪ್ರಾಂತ ವಿಶೇಷ ಸಂಪರ್ಕ ಟೋಳಿ ಪ್ರಮುಖ ಹೊಣೆ ವಹಿಸಲಾಯಿತು. ಪರಿಷದ್‌ ವಿವಿಧ‌ ವಿಭಾಗಗಳಲ್ಲಿ ಡಾ. ವೀರೇಂದ್ರ ಶಾಸ್ತ್ರಿ (ಸೇವಾ ಪ್ರಮುಖ), ರೋಹಿತ್‌ ಕುಲಕರ್ಣಿ (ಮಂದಿರ ಅರ್ಚಕ, ಪುರೋಹಿತ ಪ್ರಮುಖ), ಹರೀಶ ಅಗ್ರಹಾರ (ಸಾಮಾಜಿಕ ಸಾಮರಸ್ಯ ಪ್ರಮುಖ, ಮಹೇಶ ವಿಶ್ವಕರ್ಮ (ಸತ್ಸಂಗ ಪ್ರಮುಖ), ವೀರೇಶ ಚಿದ್ರಿ, (ವಿಶೇಷ ಸಂಪರ್ಕ ಪ್ರಮುಖ), ದತ್ತು ವಾಲ್ದೊಡ್ಡಿ (ಬಜರಂಗ ದಳ ಜಿಲ್ಲಾ ಸಹ ಸಂಯೋಜಕ) ಹೆಸರು ಘೋಷಣೆ ಮಾಡಲಾಯಿತು.

ಈ ವೇಳೆ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮಾತನಾಡಿ, ಪರಿಷದ್‌ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡಬೇಕು. ದೇಶ, ಧರ್ಮ, ಸಮಾಜ, ಸಂಸ್ಕೃತಿ ದೃಷ್ಟಿಯಿಂದ ಎಲ್ಲರನ್ನೂ ಸಂಘಟಿಸಿ ಸಮಾಜವನ್ನು ಬಲಪಡಿಸುವ ಕೆಲಸಕ್ಕೆ ಒತ್ತು ನೀಡಬೇಕು ಎಂದು ನೂತನ‌ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ನೂತನ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಎಲ್ಲ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಈ ಹೊಣೆಗಾರಿಕೆ ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ತರದಂತೆ ಶ್ರದ್ಧೆಯಿಂದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಹಗಲಿರುಳೆನ್ನದೇ ತನು, ಮನ, ಧನದಿಂದ ದುಡಿಯುತ್ತೇನೆ. ಸಮಾಜದ ಎಲ್ಲರೂ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಪರಿಷದ್‌ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಮಕೃಷ್ಣ ಸಾಳೆ, ಪ್ರಾಂತ ವಿಶೇಷ ಸಂಪರ್ಕ ಸಹ ಪ್ರಮುಖ ಸತೀಶ ನೌಬಾದೆ, ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಯದಲಾಪುರೆ ಬೇಮಳಖೇಡ, ಬಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣ ಸೋರಳ್ಳಿ ಆಣದೂರ, ಡಾ. ವೀರೇಂದ್ರ ಶಾಸ್ತ್ರಿ, ಜಯಶಂಕರ ಬಿಯಾನಿ‌ ಇತರರಿದ್ದರು. ಅಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು.

ಬೀದರ್‌ ನಗರದ ದೇವಿ ಮಂದಿರ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಪ್ರಮುಖರ ಬೈಠಕ್‌ನಲ್ಲಿ ವಿಶ್ವ ಹಿಂದು ಪರಿಷದ್‌ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಯುವ ಮುಖಂಡ ವೀರಶೆಟ್ಟಿ ಖ್ಯಾಮಾ ಅವರನ್ನು ನೇಮಿಸಲಾಯಿತು. ಪರಿಷದ್‌ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ ಇದ್ದರು.

----------

ಸಂಘಟಕನಿಗೆ ಸ್ಥಾನಕಳೆದ‌ ಒಂದೂವರೆ ದಶಕದಿಂದ ವೀರಶೆಟ್ಟಿ ಖ್ಯಾಮಾ ಅವರು ಹಿಂದುಪರ ಚಟುವಟಿಕೆಗಳಲ್ಲಿ ಸದಾ ಸಕ್ರೀಯರಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಉತ್ತಮ ಸಂಘಟಕನಿಗೆ ಇದೀಗ ವಿಶ್ವ ಹಿಂದು ಪರಿಷದ್‌ ಜಿಲ್ಲಾ ಅಧ್ಯಕ್ಷ ಸ್ಥಾನ ಲಭಿಸಿದೆ. ಶ್ರೀ ರಾಮಸೇನಾ ಜಿಲ್ಲಾ ಅಧ್ಯಕ್ಷರಾಗಿ ಹತ್ತು ವರ್ಷ ಕೆಲಸ ಮಾಡಿದ್ದಾರೆ. ಭಾರತೀಯ ಗೋ ಪರಿವಾರ ಜಿಲ್ಲಾ ಅಧ್ಯಕ್ಷರಾಗಿ ಹತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾಗಿ ನಾಲ್ಕನೇ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಭಾರತ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ, ಶಿವಸೇನಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ ಎಂದು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

---

ಸನಾತನ‌ ಹಿಂದು ಧರ್ಮಕ್ಕೆ ಶಕ್ತಿ ತುಂಬುವದರ ಜೊತೆಗೆ ಸದೃಢ ಭಾರತ, ಸಶಕ್ತ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷದ್‌ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಪ್ರಮುಖರು ಸೇರಿ ನನಗೆ ಜಿಲ್ಲಾ ಜವಾಬ್ದಾರಿ ವಹಿಸಿದ್ದಾರೆ. ಹಿರಿಯರ ಮಾರ್ಗದರ್ಶನ, ಎಲ್ಲರ ಸಹಯೋಗದಿಂದ ಪರಿಷತ್‌ ಚಟುವಟಿಕೆಗಳಿಗೆ ವೇಗ ನೀಡಲು ಅವಿರತವಾಗಿ ಶ್ರಮಿಸುವೆ. - ವೀರಶೆಟ್ಟಿ ಖ್ಯಾಮಾ, ವಿಶ್ವ ಹಿಂದು ಪರಿಷದ್‌ ಜಿಲ್ಲಾಧ್ಯಕ್ಷ