ವೇಮನರ ವಚನಗಳು ಸಮಾಜಕ್ಕೆ ದಾರಿದೀಪ

| Published : Jan 21 2025, 01:32 AM IST

ಸಾರಾಂಶ

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ ಅವರು ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಹಾಯೋಗಿ ವೇಮನರು ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದರು. ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಸಮಾರಂಭದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜಯಂತಿ ಆಚರಣೆಗಳು ಜಾತಿಯ ಒಗ್ಗಟ್ಟು, ಜಾತಿಯ ಬಲ ಪ್ರದರ್ಶನವಲ್ಲ. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಮಹನೀಯರ ಸಂದೇಶ, ಬದುಕು, ವಿಚಾರಧಾರೆಗಳು ಇಡೀ ಮಾನವ ಸಂಕುಲಕ್ಕೆ ಸಂಬಂಧಪಟ್ಟಿವೆ. ವೇಮನರ ವಿಚಾರ ತಿಳಿದುಕೊಳ್ಳುವ ಮೂಲಕ ನಾವು ಮೌಲ್ಯಯುತ ಬದುಕು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ರೆಡ್ಡಿ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಉತ್ತಮ ಸಮಾಜವಾಗಿದೆ. ಮಹನೀಯರ ಜಯಂತಿ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಹನೀಯರ, ಮಾನವತಾವಾದಿಗಳ ವಿಚಾರಧಾರೆಗಳನ್ನು ತಿಳಿಸಬೇಕು. ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ ಅಳವಿನಂಚಿನಲ್ಲಿವೆ ಹಾಗಾಗಿ ಕುಸಿಯುತ್ತಿರುವ ಮೌಲ್ಯಗಳನ್ನು ಕಟ್ಟಬೇಕು. ಆ ಮೂಲಕ ಸಮಾಜವನ್ನು ಉತ್ತಮ ಮಾರ್ಗಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ ಮಾತನಾಡಿ, ವೇಮನರು ತೆಲುಗಿನಲ್ಲಿ ಬರೆದ ಅನೇಕ ವಚನಗಳು ಬೇರೆ ಬೇರೆ ಭಾಷೆಗಳಲ್ಲದೇ ಕನ್ನಡಕ್ಕೂ ಭಾಷಾಂತರಗೊಂಡಿವೆ. ಮಹಾಯೋಗಿ ವೇಮನರ ವಚನಗಳು ಸಮಾಜಕ್ಕೆ ಮಾರ್ಗದರ್ಶನವಾಗಿದ್ದು ಅವರ ವಚನಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಜಿವಿ ಆಂಜನಪ್ಪ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಬಿ.ಭೀಮರೆಡ್ಡಿ ಉಪನ್ಯಾಸ ನೀಡಿ, ವೇಮನರು ಹೇಳಿದ ವಚನಗಳಲ್ಲಿ ನಮ್ಮ ಜೀವನಕ್ಕೆ ಅನ್ವಯಿಸುವಂತಹ ಹಾಗೂ ಜೀವನ ಉತ್ತಮವಾಗಿ ಸಾಗುವುದಕ್ಕೆ ಬೇಕಾಗುವ ಜ್ಞಾನ ಪಡೆಯುವಂತಹ ಸಂಗತಿಗಳಿವೆ. ವೇಮನ ವಚನಗಳನ್ನು ಓದಿ ಅರ್ಥೈಸಿಕೊಂಡು ಬದುಕಿದರೆ ಜೀವನ ಸಾರ್ಥಕವಾಗಲಿದೆ ಎಂದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ರೆಡ್ಡಿ ಸಮುದಾಯದ ನಿವೃತ್ತ ಅಧಿಕಾರಿಗಳಾದ ವಿಶ್ವನಾಥ ರೆಡ್ಡಿ, ಇಂಟೂರು ಜಯರಾಮರೆಡ್ಡಿ, ರಾಮಕೃಷ್ಣರೆಡ್ಡಿ, ಹನುಮಂತರೆಡ್ಡಿ, ವೆಂಕಟೇಶ್ ರೆಡ್ಡಿ, ಮುಖಂಡರಾದ ವಿಜಯಕಮಾರ್ ಡಿ.ಕೆ.ಹಟ್ಟಿ, ಮಂಜುನಾಥ ಬೆಳಗಟ್ಟ, ವಕೀಲ ಬಾಬುರೆಡ್ಡಿ ಮುಂತಾದವರು ಹಾಜರಿದ್ದರು.