ಮಹಾಯೋಗಿ ವೇಮನ ವಚನಗಳು ಲೋಕಜ್ಞಾನ ಹಾಗೂ ಜೀವನ ಮೌಲ್ಯಗಳನ್ನು ಸರಳವಾಗಿ ಬೋಧಿಸುತ್ತವೆ.
ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣ ಹಾಗೂ ಹೇಮ ವೇಮ ರೆಡ್ಡಿ ಜನಸಂಘದ ಕಚೇರಿಯಲ್ಲಿ ಮಹಾಯೋಗಿ ವೇಮನರ 614ನೇ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನಸಂಘದ ಅಧ್ಯಕ್ಷ ಇಟಗಿ ಬಸಲಿಂಗಪ್ಪ ಮಾತನಾಡಿ, ಮಹಾಯೋಗಿ ವೇಮನ ವಚನಗಳು ಲೋಕಜ್ಞಾನ ಹಾಗೂ ಜೀವನ ಮೌಲ್ಯಗಳನ್ನು ಸರಳವಾಗಿ ಬೋಧಿಸುತ್ತವೆ. ಲೌಕಿಕ ಬದುಕಿನ ಮಧ್ಯೆಯೇ ಆತ್ಮಸಾಧನೆಗೆ ದಾರಿ ತೋರಿಸುವ ವೇಮನರ ವಚನಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ ಎಂದರು.ಸಮಾಜದಲ್ಲಿ ನೈತಿಕತೆ, ಸತ್ಯ ಮತ್ತು ಸಮಾನತೆಯ ಅರಿವು ಮೂಡಿಸಲು ವೇಮನರ ಚಿಂತನೆಗಳು ಅತ್ಯಂತ ಪ್ರಾಸಂಗಿಕವಾಗಿವೆ ಎಂದು ಅಭಿಪ್ರಾಯಪಟ್ಟರು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ವಿ. ಸುದರ್ಶನರೆಡ್ಡಿ ಮಾತನಾಡಿ, ರಾಜ್ಯದ ರೆಡ್ಡಿ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಪಟ್ಟಣದ ಹೇಮ ವೇಮ ರೆಡ್ಡಿ ಜನಸಂಘಕ್ಕೆ ಸ್ವಂತ ಸಮುದಾಯ ಭವನ ನಿರ್ಮಾಣಕ್ಕಾಗಿ ಪುರಸಭಾಡಳಿತವು ನೂರು ಅಡಿ ಉದ್ದಗಲದ ನಿವೇಶನ ಮಂಜೂರು ಮಾಡಬೇಕು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಮಹಾಯೋಗಿ ವೇಮನ ಜಯಂತ್ಯುತ್ಸವಕ್ಕೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿ ಮಾತನಾಡಿ, ವೇಮನ ವಚನಗಳು ಸರಳ ಭಾಷೆಯಲ್ಲಿ ಜೀವನದ ಗಂಭೀರ ತತ್ತ್ವಗಳನ್ನು ವಿವರಿಸುತ್ತವೆ. ಇವುಗಳನ್ನು ಮಕ್ಕಳ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಚಯಿಸಿ, ನೈತಿಕ ಶಿಕ್ಷಣದ ಭಾಗವಾಗಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್ಡಿ ಜನಸಂಘದ ಪದಾಧಿಕಾರಿಗಳಾದ ಡಾ. ಕೆ. ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ಪ್ರಭಾಕರರೆಡ್ಡಿ, ಎ. ವೆಂಕಟೇಶರೆಡ್ಡಿ, ನರಸಿಂಹರೆಡ್ಡಿ, ಲಕ್ಷ್ಮಣರೆಡ್ಡಿ, ಎ. ಶ್ರೀನಿವಾಸರೆಡ್ಡಿ, ಕಿಶೋರರೆಡ್ಡಿ, ಮೋಹನರೆಡ್ಡಿ, ಕೃಷ್ಣರೆಡ್ಡಿ, ರಾಜಶೇಖರರೆಡ್ಡಿ, ದುರ್ಗಾಪ್ರಸಾದರೆಡ್ಡಿ, ಸಂದೀಪರೆಡ್ಡಿ, ಮುರುಳಿಮೋಹನರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.