ಹೊರನೋಟಕ್ಕೆ ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದರೂ, ಒಳಗಣ್ಣಿನಲ್ಲಿ ಅವರು ಅಪ್ಪಟ ಮಾತೃಹೃದಯಿಯಾಗಿದ್ದರು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ
ಕನ್ನಡಪ್ರಭ ವಾರ್ತೆ ಪಾವಗಡ
ಹೊರನೋಟಕ್ಕೆ ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದರೂ, ಒಳಗಣ್ಣಿನಲ್ಲಿ ಅವರು ಅಪ್ಪಟ ಮಾತೃಹೃದಯಿಯಾಗಿದ್ದರು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಶೋಕ ಸಂದೇಶದಲ್ಲಿ ,ಧೀಮಂತ ನಾಯಕ ಮಾಜಿ ಸಚಿವರಾದ ವೆಂಕಟರಮಣಪ್ಪ ಈ ರಾಜ್ಯ ಕಂಡ ಅತ್ಯಂತ ಉತ್ತಮ ರಾಜಕಾರಣಿ. ಅಭಿವೃದ್ಧಿಗೆ ಹೆಚ್ಚು ಬದ್ದರಾಗಿ ಕೆಲಸ ಮಾಡುತ್ತಿದ್ದರು. ಸದಾ ಜನರ ಮಧ್ಯೆ ಇದ್ದು ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಅವರ ಅಗಲಿಕೆ ಅತ್ಯಂತ ನೋವು ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ. ಭೋವಿ ಸಮಾಜವನ್ನು ಒಂದೆಡೆ ತಂದು ಸಂಘಟಿಸಿದ್ದು,ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಆಚರಿಸಿದ್ದು ಅವರ ಬೆಂಬಲದಿಂದಲೇ. ವೆಂಕಟರಮಣಪ್ಪ ಅವರು ಸಮಾಜದ ಧ್ವನಿಯಿಲ್ಲದವರಿಗೆ ಹೇಗೆ ಆಸರೆಯಾಗಿದ್ದರು ಎಂಬುದನ್ನು ನೆನೆದಿರುವ ಸ್ವಾಮೀಜಿ, ಅವರು ಭೋವಿ ಸಮಾಜದ ಅಧಿಕಾರಿಗಳಿಗೆ ಕೇವಲ ನಾಯಕರಾಗಿರಲಿಲ್ಲ. ಒಂದು ಗಟ್ಟಿ ರಕ್ಷಾಕವಚದಂತೆ ಇದ್ದವರು. ಅಧಿಕಾರ ಇರಲಿ, ಬಿಡಲಿ, ತೊಂದರೆಗೆ ಸಿಲುಕಿದ ಸಮಾಜದ ಅಧಿಕಾರಿಗಳು ಕಣ್ಣೀರು ಹಾಕುತ್ತಾ ಬಂದರೆ, ಕಣ್ಣೊರೆಸುವ ಆಪತ್ಬಾಂಧವನಂತೆ ನಿಲ್ಲುತ್ತಿದ್ದರು ಎಂದು ಕೊಂಡಾಡಿದ್ದಾರೆ. ರಾಜ್ಯಾದ್ಯಂತ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ್ದು, ಪಾವಗಡ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ ತಮ್ಮ ಇಡೀ ಬದುಕನ್ನೇ ಅವರು ಸಮರ್ಪಿಸಿಕೊಂಡಿದ್ದರು. ಅವರ ಅಗಲಿಕೆ ಭೋವಿ ಸಮಾಜಕ್ಕೆ ಹಾಗೂ ಪಾವಗಡ ಕ್ಷೇತ್ರಕ್ಕೆ ಎಂದಿಗೂ ತುಂಬಲಾರದ ದೊಡ್ಡ ನಷ್ಟ ಎಂದು ಅವರು ತಿಳಿಸಿದ್ದಾರೆ.