ವೆಂಕಟೇಶಗೆ ಕೊಲೆ ಬೆದರಿಕೆ ಇತ್ತು: ರೆಡ್ಡಿ

| Published : Oct 09 2025, 02:01 AM IST

ಸಾರಾಂಶ

ಯುವ ಮೋರ್ಚಾದಲ್ಲಿ ಮುಂದುವರಿಸುವಂತೆ ತಾವು ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಚರ್ಚಿಸಿದ್ದೇವೆ. ಆದರೆ ವಿಧಿ ಆಟ ವಿಚಿತ್ರವಾಗಿರುವುದು ನೋವು ತಂದಿದೆ

ಗಂಗಾವತಿ: ಬಿಜೆಪಿ ನಗರ ಘಟಕ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶಗೆ ಈ ಮೊದಲೇ ಕೊಲೆ ಬೆದರಿಕೆ ಹಾಕಿದ್ದರು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಮುರಾರಿ ನಗರದಲ್ಲಿರುವ ಹತ್ಯೆಯಾದ ವೆಂಕಟೇಶ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ ನಂತರ ಮಾತನಾಡಿದರು.

ಕಳೆದ ವಾರದ ಹಿಂದೆ ವೆಂಕಟೇಶಗೆ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರೂ ಸಹ ಪೊಲೀಸರು ಇದರ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳದೆ ಇರುವುದು ಕೊಲೆಗೆ ಕಾರಣ ಎನ್ನಬಹುದು ಎಂದರು.

ಬಿಜೆಪಿ ನಗರ ಘಟಕ ಯುವ ಮೋರ್ಚಾದ ಅಧ್ಯಕ್ಷರಾಗಿ ವೆಂಕಟೇಶ ಸಂಘಟನೆ ಮಾಡಿದ್ದಾರೆ. ಯುವಕರ ಪಡೆ ಈತನ ಹಿಂದೆ ಇತ್ತು. ಈ ಕಾರಣಕ್ಕಾಗಿ ಯುವ ಮೋರ್ಚಾದಲ್ಲಿ ಮುಂದುವರಿಸುವಂತೆ ತಾವು ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಚರ್ಚಿಸಿದ್ದೇವೆ. ಆದರೆ ವಿಧಿ ಆಟ ವಿಚಿತ್ರವಾಗಿರುವುದು ನೋವು ತಂದಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಸಾಂತ್ವನ ತಿಳಿಸಿ ವೆಂಕಟೇಶ ಒಬ್ಬ ಬಿಜೆಪಿ ಸಂಘಟಕರಾಗಿದ್ದರು.ಇಂತಹ ಕೃತ್ಯ ನಡೆಯಬಾರದಿತ್ತು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಇದ್ದರು.