ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಶೆಡ್ ಮುಂದೆ ಸಂತ್ರಸ್ತರು ಬುಧವಾರ ಅನಿರ್ದಿಷ್ಟಾವಧಿವರೆಗೆ ಧರಣಿ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ತಾಲೂಕಿನ ಇದ್ದಲಗಿ ಗ್ರಾಮದ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಶೆಡ್ ಮುಂದೆ ಸಂತ್ರಸ್ತರು ಬುಧವಾರ ಅನಿರ್ದಿಷ್ಟಾವಧಿವರೆಗೆ ಧರಣಿ ಆರಂಭಿಸಿದರು.ಗ್ರಾಮದ ಸಂತ್ರಸ್ತ ಹಸನಸಾಬ್ ಪಿಂಜಾರ ಮಾತನಾಡಿ, ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿಯ ಪ್ರವಾಹದಿಂದ ಬಾಧಿತ ಪ್ರದೇಶಗಳಲ್ಲಿ 19 ವರ್ಷದಿಂದ ಸಂತ್ರಸ್ತರು ವಾಸಿಸುವ ಶೆಡ್ಗಳಲ್ಲಿ ಮಳೆ ಹಾಗೂ ಬಿಸಿಲು ತಾಪದಿಂದ ಶಿಥಲಾವಸ್ಥೆಗೆ ತಲುಪಿದ್ದು, ಇದರಲ್ಲಿಯೇ ಇಲ್ಲಿನ ಜನರು ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಇದ್ದಲಗಿ ಗ್ರಾಮದಲ್ಲಿ 19 ವರ್ಷದ ಹಿಂದೆ ತಾತ್ಕಾಲಿಕವಾಗಿ ನಿರ್ಮಿಸಿದ 200ಕ್ಕೂ ಅಧಿಕ ಶೆಡ್ ಗಳಲ್ಲಿ ಸಂತ್ರಸ್ತರು ವಾಸಿಸುತ್ತಿದ್ದು. ತಗಡಿನ ಶೆಡ್ಗಳು ತುಕ್ಕು ಹಿಡಿದು ಬಲೀಸ್ಗಳು ನೆಲದಲ್ಲಿ ಕೊಳೆತಿದ್ದು, ಯಾವುದೇ ಸಮಯದಲ್ಲಿಯಾದರೂ ಶೆಡ್ ಬೀಳುವ ಸ್ಥಿತಿಯಲ್ಲಿದೆ. ದುರ್ಘಟನೆ ನಡೆಯುವ ಮುಂಚೆಯೇ ಕೂಡಲೇ ಹೊಸ ಶೆಡ್ ಗಳನ್ನು ಪುನರ್ ನಿರ್ಮಾಣ ಮಾಡಬೇಕು. ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸುವರೆಗೂ ಮತ್ತು ಮನೆ ಕಟ್ಟಿಸಿಕೊಡುವವರೆಗೂ ನಮಗೆ ತಾತ್ಕಾಲಿಕ ಶೆಡ್ಗಳಲ್ಲಿ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು. ಸರ್ಕಾರ ನೀಡಿದ ಪುನರ್ವಸತಿ ಕೇಂದ್ರಗಳಲ್ಲಿ ನಿಯಮಾವಳಿಗಳಲ್ಲಿ ಅವಶ್ಯಕ ತಿದ್ದುಪಡಿ ಮಾಡಿ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಒಂದು ಗುಂಟೆ ವಿಸ್ತೀರ್ಣ ಬದಲಿಗೆ ನಾಲ್ಕು ಗುಂಟೆಯಂತೆ ನಿವೇಶನಗಳ ಮರುಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸುವ ಕ್ರಮ ಕೈಗೊಳ್ಳಬೇಕು. ನಮ್ಮ ಎಲ್ಲ ಬೇಡಿಕೆಗಳನನ್ನು ಶಾಶ್ವತವಾಗಿ ಈಡೇರಿಸುವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ತಿಳಿಸಿದರು.
ಸಂತ್ರಸ್ತರಾದ ಭೀಮಣ್ಣ ಅಡಿವಿಹಾಳ, ಯಲ್ಲಪ್ಪ ಆನೆಹೊಸೂರ, ಬಸವರಾಜ ಮುಳ್ಳೂರ, ಶರಣಪ್ಪ ಮುಳ್ಳೂರ, ಮಲ್ಲಮ್ಮ ಘಟ್ಟಿಮಠ, ಮುತ್ತವ್ವ ಬೇನಾಳ, ಶ್ಯಾವವ್ವ ಕೆಸರಭಾವಿ, ಬಸವ್ವ ಸುಂಕದ, ಅಮೀನಸಾಬ ನಿಡಗುಂದಿ, ಸಂಗಪ್ಪ ಚಿಕ್ಕೋಡಿ ಸೇರಿದಂತೆ ಗ್ರಾಮಸ್ಥರು ಇದ್ದರು.