ಮೂರು ದಿನಕ್ಕೆ ಒಂದು ರೈತ ಸಂಘಟನೆ ಹುಟ್ಟಿದರೆ ರೈತರಿಗೆ ಯಾರು ಬೆಲೆ ಕೊಡುತ್ತಾರೆ. 31 ಜಿಲ್ಲೆಯ ಎಲ್ಲ ರೈತರು ಒಂದಾಗಿ ನಿಂತರೆ ಅಧಿಕಾರಿಗಳು, ರಾಜಕಾರಣಿಗಳು ನಡುಗುತ್ತಾರೆ.
ಹೊಳೆಆಲೂರು: ಉತ್ತರ ಕರ್ನಾಟಕದ ರೈತರ ಸಮಸ್ಯೆಗಳನ್ನು ನಿವಾರಿಸಬೇಕಾದ ರಾಜ್ಯ ಮತ್ತು ಕೇಂದ್ರದ ಎರಡು ಪಕ್ಷದ ರಾಜಕೀಯ ಸ್ಪಂದಿಸುತ್ತಿಲ್ಲ. ಅವರಿಂದ ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಹೋರಾಟಕ್ಕೆ ನ್ಯಾಯ ಸಿಗುವುದು ಕನಸಿನ ಮಾತು. ರೈತರೇ ಟೊಂಕ ಕಟ್ಟಿ ನಿಂತಾಗ ಮಾತ್ರ ಸಾಧ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು.
ಸಮೀಪದ ಮೆಣಸಗಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಒಕ್ಕೂಟ ಸಹಯೋಗದಲ್ಲಿ ಜರುಗಿದ ರೈತರ ಬೃಹತ್ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಯಾವ ಪಕ್ಷದವರೂ ಇಚ್ಛಾಶಕ್ತಿ ತೋರಿಸುತ್ತಿಲ್ಲ. ನರಗುಂದ ಹಾಗೂ ನವಲಗುಂದ ಹೋರಾಟದಲ್ಲಿ ಗುಂಡು ಹಾರಿಸಿದ ಆರ್. ಗುಂಡೂರಾವ್ ಸರ್ಕಾರ ರೈತ ನಾಯಕ ನಂಜುಂಡಸ್ವಾಮಿ ಅವರ ಒಂದೇ ಮಾತಿಗೆ ಉರುಳಿ ಬಿದ್ದ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ.
ಮೂರು ದಿನಕ್ಕೆ ಒಂದು ರೈತ ಸಂಘಟನೆ ಹುಟ್ಟಿದರೆ ರೈತರಿಗೆ ಯಾರು ಬೆಲೆ ಕೊಡುತ್ತಾರೆ. 31 ಜಿಲ್ಲೆಯ ಎಲ್ಲ ರೈತರು ಒಂದಾಗಿ ನಿಂತರೆ ಅಧಿಕಾರಿಗಳು, ರಾಜಕಾರಣಿಗಳು ನಡುಗುತ್ತಾರೆ. ಕಬ್ಬಿಗೆ ಬೆಂಬಲ ಬೆಲೆ, ಮಹದಾಯಿ ಕಳಸಾ ಬಂಡೂರಿ ಜಾರಿ, ಬೆಳೆ ಹಾನಿ ಪರಿಹಾರ ಘೋಷಣೆ, ಬೆಳೆ ಬರುವ ಮೊದಲೇ ಬೆಂಬಲ ಘೋಷಣೆ, ಕೊಳಚೆ ಕಾಲುವೆ ದುರಸ್ತಿ ಸಮಸ್ಯೆ ಪರಿಹರಿಸಲು ಸೆ. 23ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿ ಮನೆಗೆ ಒಂದು ಲಕ್ಷ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದರು.ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೇವಲ ಮೊಸಳೆ ಕಣ್ಣೀರು ಸುರಿಸುತ್ತವೆ ಹೊರತು ಮಹದಾಯಿ ಯೋಜನೆ ಜಾರಿಗೊಳಿಸುವುದಿಲ್ಲ. ರೈತರ ಕೈಯಲ್ಲಿ ಬಾರುಕೋಲು, ರೈತ ಮಹಿಳೆಯರು ಕಸಬರಿಗೆ ಬರುವವರೆಗೂ ನಮ್ಮ ನೀರು ನಮಗೆ ಸಿಗುವುದಿಲ್ಲ. ಆದ್ದರಿಂದ ರೈತರೆಲ್ಲರೂ ಒಂದಾಗಿ ಹೋರಾಡಿದಾಗ ಮಾತ್ರ ಸಾದ್ಯ, ಹಾಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ವೇಳೆ ಲಿಂಗಬಸವೇಶ್ವರ ಸಂಸ್ಥಾನ ಮಠದ ಮೂದಿಯಪ್ಪಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಪಾಟೀಲ, ಚಿಕ್ಕೋಡಿ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಮಾತನಾಡಿದರು.ಹಸಿರುಸೇನೆ ರಾಜ್ಯಾಧ್ಯಕ್ಷ ಚನ್ನಪ್ಪ ಪೂಜಾರಿ, ಗುರುದೇವ ಸಿದ್ದಾಪುರಮಠ, ಪ್ರವೀಣ ಕುಲಕರ್ಣಿ, ಅನಿಲ ಅಂಗಡಿ, ಮಲ್ಲಪ್ಪ ಕಳ್ಳಿಮನಿ, ಈರಣ್ಣ ದೇಸಾಯಿ, ನಾಗನಗೌಡ ಹಿರೇಗೌಡ್ರ, ರಮೇಶ ನಾಯ್ಕರ, ರಾಮನಗೌಡ ಹಿರೇಗೌಡ್ರ, ಚಂದ್ರಗೌಡ ಮುಲ್ಕಿಪಾಟಿಲ, ನಿಂಗನಗೌಡ ಹಳೆಪೊಲೀಸಪಾಟೀಲ ಹಾಗೂ ರಾಜ್ಯದ ವಿವಿಧ ಭಾಗಗಳ ರೈತ ಸಂಘಟನೆಗಳ ಮುಖಂಡರು, ರೈತ ಮಹಿಳೆಯರು ಇದ್ದರು.