ಕನ್ನಡಪ್ರಭ ವಾರ್ತೆ ಮೈಸೂರು

ಅಧುನಿಕ ಸಮಾಜದ ಹಲವಾರು ಸಮಸ್ಯೆಗಳಿಗೆ ಕಾನೂನು ಅಧ್ಯಯನವು ಪರಿಹಾರ ಒದಗಿಸುತ್ತದೆ. ಪರಿಸರ ಅಡಳಿತ, ವ್ಯವಹಾರಿಕ ಹಾಗೂ ವ್ಯಕ್ತಿಗತವಾಗಿಯು ಅನುಕೂಲವಾಗುತ್ತದೆ ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎನ್.ಪಿ. ಅನಿತಾ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ನಡೆದ 3 ದಿನಗಳ ವಿದ್ಯೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಕ್ಕು ಮತ್ತು ಕರ್ತವ್ಯಗಳು, ಪ್ರಜಾಪ್ರಭುತ್ವ ಹಾಗೂ ರೂಲ್‌ ಆಫ್‌ ಲಾ ತಿಳಿಯಬೇಕಾದರೆ ಕಾನೂನು ಅಧ್ಯಯನ ಅಗತ್ಯ ಎಂದರು.ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಲು ಕಾನೂನು ಅಧ್ಯಯನ ಬಹಳ ಮಹತ್ವಯುತವಾದ್ದು. ಇಂದಿನ ಯುವ ಪೀಳಿಗೆಯ ಹೆಚ್ಚಿನವರು ಎಂಜಿನೀಯರ್‌ ಹಾಗೂ ಡಾಕ್ಟರ್‌ ಗಳೇ ಅಗಬೇಕು ಎನ್ನುತ್ತಿರುವಾಗಲು ಕಾನೂನು ಅಧ್ಯಯನಕ್ಕೂ ಹೆಚ್ಚಿನಅಧ್ಯತೆಯನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.ಇವತ್ತಿನ ತಂತ್ರಜ್ಞಾನದಿಂದ ಎಲ್ಲಿಂದ ಎಲ್ಲಿಗಾದರು ತಲುಪಬಹುದಾಗಿದೆ. ಹಾಗೆಯೇ ಜಾಗತಿಕ ಪ್ರಪಂಚದ ಪ್ರಚಲಿತ ಸಮಸ್ಯೆಗಳು ಸವಾಲುಗಳಾಗಿವೆ. ಸೈಬರ್‌ ಕ್ರೈಂಗಳಿಂದ ವೈಯಕ್ತಿಕ ದತ್ತಾಂಶಗಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ವೈಯಕ್ತಿಕ ದತ್ತಾಂಶಗಳು ಕೂಡ ವ್ಯಕ್ತಿಗತ ಆಸ್ತಿಯಾಗಿದೆ. ಮತ್ತೊಂದು ಕಡೆ ಕೃತಕ ಬುದ್ಧಿಮತ್ತೆ ಸಹ ಜಾಗತಿಕ ಚರ್ಚೆಯಲ್ಲಿರುವ ವಿಷಯವಾಗಿದೆ. ಡಾಕ್ಟರ್‌ ಗಳಿಗೆ ಹಾಗೂ ಎಂಜಿನಿಯರ್ ಗಳಿಗೂ ಎಐ ಸ್ಪರ್ಧೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಧೀಶರುಗಳಿಲ್ಲದ ನ್ಯಾಯಾಲಯಗಳನ್ನು (ಎಐ ಪ್ರತಿನಿಧಿತ ) ಊಹಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.ನಮ್ಮೆಲ್ಲರ ಭೌಧಿಕ ಆಸ್ತಿಗಳನ್ನು ಕಾಪಾಡಿಕೊಳ್ಳಲು ಕಾನೂನು ಅಧ್ಯಯನ ಮುಖ್ಯವಾಗಿದೆ. ಕಾನೂನು ಶಿಕ್ಷಣ ಪಡೆದವರಿಗೆ ಕಾನೂನು ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತವೆ. ಸಾಮಾಜಿಕ ಪಿಡುಗುಗಳಾದಭ್ರಷ್ಟಾಚಾರ, ಮಕ್ಕಳ ದುರುಪಯೋಗ ಮುಂತಾದ ಸಮಸ್ಯೆಗಳಿಗೆ ಕಾನೂನು ಅಧ್ಯಯನ ಪರಿಹಾರ ನೀಡುತ್ತದೆ ಎಂದು ಅವರು ಹೇಳಿದರು.ಇದೇ ವೇಳೆ ವಿವಿಧ ಸರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಲಾಯಿತು. ವಿದ್ಯೋತ್ಸವದ ವಿವಿಧ ಸರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾವರ್ಧಕ ಕಾನೂನು ಕಾಲೇಜು ಪ್ರಥಮ ಸ್ಥಾನ ಗಳಿಸಿತು.ವಿದ್ಯಾರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್‌, ಕಾಲೇಜಿನ ಸಿಎಂಸಿ ಅಧ್ಯಕ್ಷ ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್. ಪ್ರಕೃತಿ‌, ಡಾ.ಟಿ.ಎಂ. ಪ್ರಶಾಂತ್‌, ಲಲಿತಾ ಮೊದಲಾದವರು ಇದ್ದರು.