ಸಾರಾಂಶ
ರಾಮನಗರ: ಗಣಪತಿಯ ಅನುಮತಿಯಿಲ್ಲದೆ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು. ಆದುದರಿಂದ ಎಲ್ಲ ಮಂಗಳ ಕಾರ್ಯಗಳಲ್ಲಿ ಅಥವಾ ಇತರ ಯಾವುದೇ ದೇವತೆಯ ಪೂಜೆ ಮಾಡುವಾಗ ಮೊದಲು ಗಣಪತಿಯ ಪೂಜೆ ಮಾಡಲಾಗುತ್ತದೆ ಎಂದು ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಾಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿಡದಿ ಹೋಬಳಿಯ ಹೊಸದೊಡ್ಡಿ ಶ್ರೀ ವರಸಿದ್ಧಿ ವಿನಾಯಕ ಗೆಳೆಯರ ಬಳಗದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಪ್ರತಿಷ್ಠಾಪನ ಮಹೋತ್ಸವ ಹಾಗೂ ಕುಂಭಾಭಿಷೇಕ ಉದ್ಘಾಟಿಸಿದ ಶ್ರೀಗಳು, ಒಮ್ಮೆ ಗಣಪತಿಯ ಪೂಜೆ ನೆರವೇರಿಸಿ ದಿಕ್ಕುಗಳನ್ನು ಮುಕ್ತಗೊಳಿಸಿದರೆ ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಆ ದೇವತೆಯು ಪೂಜಾಸ್ಥಳಕ್ಕೆ ಬರಬಹುದು. ಇದನ್ನೇ ಮಹಾದ್ವಾರದ ಅಥವಾ ಮಹಾಗಣಪತಿಯ ಪೂಜೆ ಎನ್ನುತ್ತಾರೆ ಎಂದರು.ಹಿಂದೂ ಧರ್ಮದಲ್ಲಿ ಗಣಪನಿಗೆ ವಿಶೇಷ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿಗೆ ಪ್ರಥಮ ಪೂಜೆಯ ಅಧಿದೇವತೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ವಿಘ್ನಗಳಾಗದಂತೆ ಗಣನಾಯಕನಿಗೆ ಮೊದಲು ಪೂಜೆ ನೆರವೇರಿಸುತ್ತೇವೆ ಎಂದರು.
ವಿಘ್ನ ನಿವಾರಕ ಗಣಪತಿಗೆ 108 ಹೆಸರುಗಳಿವೆ. ಆ ಹೆಸರೆಲ್ಲವನ್ನು ಸೇರಿಸಿದ ಒಂದು ಸ್ತೋತ್ರವೂ ಇದೆ. ಗಣೇಶನ ಪ್ರತಿಯೊಂದು ಹೆಸರಿಗೂ ಒಂದೊಂದು ಅರ್ಥವಿದೆ. ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆ ಎಂಬ ಹೆಸರೂ ವಿನಾಯಕ ದೇವರಿಗಿದೆ. ಗಣೇಶನ ಆನೆಯ ತಲೆ ಬುದ್ಧಿವಂತಿಕೆಯ ಸೂಚನೆಯಾಗಿದ್ದರೆ, ಉದ್ದ ಕಿವಿಗಳು ಅವರ ಮಹತ್ವವನ್ನು ಸಾರುತ್ತವೆ ಎಂಬುದು ವೇದಗಳಿಂದ ತಿಳಿದು ಬರುತ್ತದೆ ಎಂದು ಶ್ರೀಗಳು ಹೇಳಿದರು.ಶಾಸಕ ಬಾಲಕೃಷ್ಣ ಮಾತನಾಡಿ, ದೇವತೆಗಳ ಪೈಕಿ ಮೊದಲ ಪೂಜೆ ವಿಘ್ನೇಶ್ವರ ದೇವರಿಗೆ ಸಲ್ಲುತ್ತದೆ. ಮಕ್ಕಳಿಬ್ಬರಿಗೆ ಶಿವ ಪಾರ್ವತಿ ಪ್ರಪಂಚವೆಲ್ಲ ಯಾರು ಮೊದಲು ಸುತ್ತಿ ಬರುತ್ತಾರೆಂದು ಹೇಳಿದಾಗ ಸುಬ್ರಹ್ಮಣ್ಯಸ್ವಾಮಿ ನವಿಲಿನ ಮೇಲೆ ಪ್ರಪಂಚ ಪರ್ಯಾಟನೆಗೆ ಹೋಗುತ್ತಾನೆ. ಆದರೆ, ಗಣಪತಿ, ಸುಬ್ರಹ್ಮಣ್ಯಸ್ವಾಮಿ ಬರುವ ಹೊತ್ತಿಗೆ ಶಿವ - ಪಾರ್ವತಿ ಸುತ್ತಲು ಮೂರು ಸುತ್ತು ಹಾಕಿ ಗಣಪ ತನ್ನ ಬುದ್ಧಿವಂತಿಕೆ ಪ್ರದರ್ಶಿಸುತ್ತಾನೆ. ಇದರರ್ಥ ಪ್ರಪಂಚ ಅಂದರೆ ತಂದೆ ತಾಯಿ. ತಂದೆ ತಾಯಿಯನ್ನು ಗೌರವಿಸಿದರೆ ಎಲ್ಲರಿಗೂ ಗೌರವ ಸಲ್ಲಿಸಿದಂತಾಗುತ್ತದೆ. ಆದ್ದರಿಂದಲೇ ಗಣಪತಿಗೆ ಮೊದಲ ಪೂಜೆ ನೆರವೇರುತ್ತದೆ ಎಂದರು.
ರಾಜ್ಯ ಅಲೆಮಾರಿ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶೇಷಪ್ಪ ಮಾತನಾಡಿ, ಹೊಸದೊಡ್ಡಿ ಗ್ರಾಮದಲ್ಲಿ ಒಂದೇ ಸಮುದಾಯಸ್ಥರು ವಾಸಿಸುತ್ತಿದ್ದು, ವಿಶ್ವದ ಜನರು ನಮ್ಮ ಗ್ರಾಮವನ್ನು ನೋಡುವಂತೆ ಹೆಸರು ಪಡೆದಿದೆ. ಗ್ರಾಮದ ಯಜಮಾನರು, ಯುವಕರ ಸಹಕಾರದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಂಗಳದಲ್ಲಿ ವಾಯುವಿಹಾರಕ್ಕೆ ಪಾಥ್, ಉದ್ಯಾನವನ, ಅಶ್ವತ್ಥಕಟ್ಟೆ ನಿರ್ಮಿಸಿ ಮಂಚನಾಯ್ಕನಹಳ್ಳಿ ಗ್ರಾಪಂನಲ್ಲೇ ಹೊಸದೊಡ್ಡಿ ಮಾದರಿ ಗ್ರಾಮವಾಗಿದೆ. ಇದೀಗ ಈ ದೇವಾಲಯ ಗ್ರಾಮದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.ತಾಪಂ ಮಾಜಿ ಅಧ್ಯಕ್ಷೆ ಶೋಭಾ, ಮಂಚನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಪವಿತ್ರ, ಸದಸ್ಯರಾದ ಲೀಲಾವತಿ, ಬಳಗದ ಅಧ್ಯಕ್ಷ ಕೃಷ್ಣ ಭಗವಾನ್, ಉಪಾಧ್ಯಕ್ಷ ಎಚ್.ಕೆ.ಧನಂಜಯ್, ಲವಕುಮಾರ್, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್, ಖಜಾಂಚಿ ಸಂತೋಷ್ ಕುಮಾರ್, ಸಹಕಾರ್ಯದರ್ಶಿ ಎಚ್.ಆರ್.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಅರಸ್, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಕಾರ್ಯದರ್ಶಿ ಕಿರಣ್ ಅಶೋಕ್ ಇತರರಿದ್ದರು.
6ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಬಿಡದಿ ಹೋಬಳಿಯ ಹೊಸದೊಡ್ಡಿಯಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಪ್ರತಿಷ್ಠಾಪನ ಮಹೋತ್ಸವ ಹಾಗೂ ಕುಂಭಾಭಿಷೇಕ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಂಜಾವಾದೂತ ಸ್ವಾಮೀಜಿ ಅವರನ್ನು ಶಾಸಕ ಬಾಲಕೃಷ್ಣ ಹಾಗೂ ರಾಜ್ಯ ಅಲೇಮಾರಿ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶೇಷಪ್ಪ ಅಭಿನಂದಿಸಿದರು.