ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವ್ಯಕ್ತಿಗಳಿಲ್ಲದೆ ಇರುವುದರಿಂದ ಮಕ್ಕಳ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ವಿಜಯ ವಿಠಲ ವಿದ್ಯಾ ಸಂಸ್ಥೆ ಟ್ರಸ್ಟಿ ಎಸ್.ಎ. ವಿಶ್ವನಾಥ್ ಹೇಳಿದರು.ನಗರದ ವಿಜಯ ವಿಠಲ ವಿದ್ಯಾಶಾಲೆಯಲ್ಲಿ ಬಿ.ಎಸ್.ಎಸ್. ವಿದ್ಯಾಸಂಸ್ಥೆ ಆವರಣದಲ್ಲಿ ವಿಜಯೋತ್ಸವ ಶೀರ್ಷಿಕೆ ಅಡಿಯಲ್ಲಿ ಪ್ರಿ ಕೆಜಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಶಾಲಾ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಸತ್ಪ್ರಜೆ ಮಾಡುವುದು ಪೋಷಕರ ಕರ್ತವ್ಯ. ನಮ್ಮಲ್ಲಿ ಕೆಲವೊಂದು ಗುಣಗಳನ್ನು ಬೆಳೆಸಿಕೊಂಡ ನಂತರ ಮಕ್ಕಳಿಗೆ ಹೇಳುವ ಅರ್ಹತೆಯನ್ನು ನಾವು ಬೆಳೆಸಿಕೊಳ್ಳುತ್ತೇವೆ. ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಸಂಸ್ಕೃತಿ, ಸಂಸ್ಕಾರವನ್ನು ಮನೆಯಿಂದಲೇ ಕಲಿಸಿ ಕೊಡಬೇಕು ಎಂದು ತಿಳಿಸಿದರು.ಸನಾತನ ಧರ್ಮದಲ್ಲಿ ಬದುಕುವುದನ್ನು ಕಲಿಯೋಣ, ನಾವು ಒಳ್ಳೆಯ ಆದರ್ಶ ವ್ಯಕ್ತಿಗಳಾಗೋಣ. ಮಕ್ಕಳನ್ನು ಆದರ್ಶ ಮಕ್ಕಳನ್ನಾಗಿ ಮಾಡೋಣ ಹಾಗೂ ದೇಶದ ಆಸ್ತಿಯನ್ನಾಗಿ ಬೆಳೆಸೋಣ ಎಂದು ತಿಳಿಸಿದರು.ವಿಜಯ ವಿಠಲ ವಿದ್ಯಾ ಸಂಸ್ಥೆ ಮತ್ತು ಬಿ.ಎಸ್.ಎಸ್ ವಿದ್ಯಾಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿ ವಾಸುದೇವ್ ಭಟ್ ಮಾತನಾಡಿ, ವಿಜಯ ವಿಠಲ ಸಂಸ್ಥೆಯ ಏಳಿಗೆ ಬಗ್ಗೆ, ಶಾಲೆಯ ಸಾಧನೆ ಮತ್ತು ಮಕ್ಕಳಿಗೆ ಆಹಾರ ಮೇಳದಿಂದ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಗಳಿಸಿದ ಆದಾಯವನ್ನು ಉಡುಪಿಯ ಪಾಜಕದಲ್ಲಿನ ಬಾಲಕಿಯರ ಮೈತ್ರಿ ಗುರುಕುಲಕ್ಕೆ 50 ಸಾವಿರ ರೂ., ವನವಾಸಿ ಕಲ್ಯಾಣಕ್ಕೆ 50 ಸಾವಿರ ರೂ., ನೀಲಾವರದ ಶ್ರೀಗಳ ಗೋ ಶಾಲೆಗೆ ಹಾಗೂ ಬುದ್ಧಿಮಾಂದ್ಯ ಶಾಲೆಗೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಹೆಮ್ಮೆ ಇದೆ ಎಂದರು.ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಒಂದರಿಂದ ಐದನೇ ತರಗತಿಯ ಟಾಪರ್ ವಿದ್ಯಾರ್ಥಿಗಳಿಗೆ ಪದಕ ನೀಡುವ ಮೂಲಕ ವೇದಿಕೆಯ ಮೇಲಿನ ಗಣ್ಯರು ಅಭಿನಂದಿಸಿದರು.ಈ ವೇಳೆ ಸಂಸ್ಥೆಯ ಟ್ರಸ್ಟಿಗಳಾದ ಸ್ವರ್ಣ ಕುಮಾರ್ ಹಾಗೂ ಮುರುಳಿಧರ್ ಭಟ್, ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜಿನ ಪ್ರಾಂಶುಪಾಲ ಸತ್ಯಪ್ರಸಾದ್, ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲ ಎಸ್.ಎ. ವೀಣಾ, ಬಿ.ಎಸ್.ಎಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪವನ್ ಕುಮಾರ್, ಶಾಲೆಯ ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.