ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉಪ ಚುನಾವಣೆಯಲ್ಲಿ ಬಿಜೆಪಿಗೆ ಜನರ ಬೆಂಬಲ ಕಂಡು ಕಾಂಗ್ರೆಸ್ ಅತಂತ್ರವಾಗಿದೆ. ದೇಶದ್ರೋಹಿಗಳ ರಕ್ಷಣೆ, ಹಿಂದೂ ಮತ್ತು ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆಯಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಶಿರೂರ ಪಟ್ಟದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಭ್ರಷ್ಟಾಚಾರ ಮತ್ತು ಹಗರಣಗಳ ಸರದಾರರಾಗಿ ಬಾಗಲಕೋಟೆಯಲ್ಲಿ ಮತ ಕೇಳುತ್ತಿರುವ ಕಾಂಗ್ರೆಸ್ ಅನ್ನು ಬುಡಸಮೇತ ಕಿತ್ತು ಹಾಕಿ. ಭದ್ರತೆ ಮತ್ತು ಭರವಸೆಯ ಬಿಜೆಪಿ ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು.

ಭ್ರಷ್ಟ ಆಡಳಿತಕ್ಕೆ ಹೆಸರಾದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಒಂದೇ ಒಂದು ಸಮರ್ಪಕವಾದ ಯೋಜನೆ ನೀಡಲು ಸಾಧ್ಯವಾಗಿಲ್ಲ. ಮತದಾರರು ಇಟ್ಟುಕೊಂಡ ನಿರೀಕ್ಷೆಗಳನ್ನು ಮಣ್ಣು ಮಾಡಿದೆ. ಕಿಸಾನ್ ಸಮ್ಮಾನ ಯೋಜನೆ, ರೈತ ಮಿತ್ರ ಯೋಜನೆಗಳಂತಹ ರೈತ ಯೋಜನೆಗಳನ್ನು ಮಣ್ಣು ಮಾಡಿ ಅನ್ನದಾತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಗ್ಯಾರಂಟಿಗಳಿಗೆ ಹಣ ಕೊಡಲಾಗದೇ ಅಬಕಾರಿ ಇಲಾಖೆಗೆ ಸುಂಕ ಏರಿಸಿ ಆಸ್ಪತ್ರೆಗಳಿಗಿಂತ ಹೆಚ್ಚು ಮದ್ಯದ ಅಂಗಡಿ ತೆರೆದಿದ್ದಾರೆ. ಬಡವರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಅಧಿಕಾರ ದಾಹಕ್ಕಾಗಿ ಬಡವರನ್ನೇ ಬಲಿ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭೀಕರ ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡ ಸಾಮಾನ್ಯರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ಬಿಎಸ್‌ವೈ ₹5 ಲಕ್ಷ ನೀಡಿದ್ದರು. ಆದರೆ , ಕಾಂಗ್ರೆಸ್ ಸರ್ಕಾರಕ್ಕೆ ಒಂದು ಮನೆ ನೀಡಲು ಸಾಧ್ಯವಾಗುತ್ತಿಲ್ಲ. ದಲಿತ ಮಹಿಳೆಯರ ಹತ್ಯೆಯಾದರೂ ಸಾಂತ್ವನ ಹೇಳುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ, ಹಿಂದೂ ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಕ್ರೂರಿಗಳ ರಕ್ಷಣೆ ಮಾಡುತ್ತಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗುವ ದೇಶದ್ರೋಹಿಗಳ ಪರವಾಗಿ ನಿಲ್ಲುತ್ತಿದೆ ಎಂದರು.ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಮುರುಗೇಶ ನಿರಾಣಿ, ವೀರಣ್ಣ ಚರಂತಿಮಠ ಅವರು ಮಾತನಾಡಿದರು.ಶಾಸಕರಾದ ಸಿದ್ದು ಸವದಿ, ಜಗದೀಶ್ ಗುಡಗುಂಟಿ, ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಪಿ.ರಾಜೀವ ಇದ್ದರು.