ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದೂ ವಿರೋಧಿ ಕಾಂಗ್ರೆಸ್‌ ಸರಕಾರ ಕಿತ್ತೊಗೆಯಲು ರಾಜ್ಯದ ಜನ ತುದಿಗಾಲಿನ ಮೇಲೆ ನಿಂತಿದ್ದಾರೆ. 2028ರ ಸಾರ್ವತ್ರಿಕ ಚುನಾವಣೆಗೆ ಬಾಗಲಕೋಟೆ ಉಪಚುನಾವಣೆ ಶ್ರೀಕಾರ ಹಾಕಲಿದೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಶರಣು ತಳ್ಳಿಕೇರಿ ಹೇಳಿದರು.

ನಗರದ ಬಿವಿವಿ ಸಂಘ ನೂತನ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ನಡೆದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣಾ ಪೂರ್ವಭಾವಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಉಪಚುನಾವಣೆ ಗೆಲ್ಲುವ ಮೂಲಕ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದೇ ಬರಲಿದೆ ಎಂಬ ಸಂದೇಶ ಸಾರೋಣ, ಬಾಗಲಕೋಟೆ ಹಿಂದೂತ್ವದ ಗಟ್ಟಿ ನೆಲವಾಗಿದ್ದು, ಹಿಂದೂ ವಿರೋಧಿ ಸರಕಾರ ತನ್ನ ಹಗರಣ, ಆಡಳಿತ ವೈಫಲ್ಯ, ಅಭಿವೃದ್ಧಿಯ ಕಾರ್ಯಗಳೇ ಇಲ್ಲದಿರುವ ಕಾಂಗ್ರೆಸ್ ಸರಕಾರ ರಾಜ್ಯದ ಜನತಗೆ ಬೇಡವಾಗಿದೆ. ಬಾಗಲಕೋಟೆ ಅಭಿವೃದ್ಧಿ ಕಂಡಿದ್ದು ಶಾಸಕರಾಗಿದ್ದ ಡಾ.ವೀರಣ್ಣ ಚರಂತಿಮಠ ಅವರ ಅವಧಿಯಲ್ಲಿ ಯಾರಿಂದ ಅಭಿವೃದ್ಧಿ ಸಾಧ್ಯ ಎಂಬ ಸತ್ಯ ಬಾಗಲಕೋಟೆ ಜನತಗೆ ಗೊತ್ತಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಅನುಕಂಪ ಪಡೆಯುವ ಸಲುವಾಗಿ ಕುರಿ ಕಾಯುವವರು ನೆನೆಪಾಗುತ್ತಾರೆ. ದೇವರಾಜ ಅರಸು ಅವರ ದಾಖಲೆ ದಾಟಿರುವೆ ಎಂಬ ಅಹಂಕಾರದಲ್ಲಿರುವ ಅವರು ಎರಡು ಬಾರಿ ಮುಖ್ಯಮಂತ್ರಿಯಾದರೂ ಕುರಿ ಕಾಯುವವರಿಗೆ ಕೊಟ್ಟಿರುವ ಸಾಧನೆ ಶೂನ್ಯ. ರಾಜ್ಯದಲ್ಲಿ ಇಲ್ಲಿವರೆಗೂ ಆಕಸ್ಮಿಕ ಸಾವಿಗೀಡಾದ 90 ಸಾವಿರ ಕುರಿಗಳಲ್ಲಿ ಕೇವಲ 30 ಸಾವಿರ ಕುರಿಗಳಿಗೆ ಪರಿಹಾರ ಕೊಟ್ಟಿದ್ದಾರೆ. ಇನ್ನೂ ₹45ಕೋಟಿ ಪರಿಹಾರ ಕೊಡಲು ಸಿಎಂ ಸಿದ್ದರಾಮಯ್ಯನವರಿಂದ ಆಗಿಲ್ಲ. ಮೊದಲು ಕುರಿ ಕಾಯುವವರಿಗೆ ನ್ಯಾಯ ಕೊಡಿ ಎಂದ ಅವರು ರಾಜಕೀಯ ಪುನರ್ಜನ್ಮ ನೀಡಿದ ಬಾಗಿಲಕೋಟೆಗೆ ತಮ್ಮ ಕೊಡುಗೆ ಶೂನ್ಯವಾಗಿದೆ ಎಂದು ತಿಳಿಸಿದರು.ಬೆಳಗಾವಿ ವಿಭಾಗದ ಪ್ರಭಾರಿ ಸಂಜಯ ಪಾಟೀಲ ಮಾತನಾಡಿ, ಬಾಗಲಕೋಟೆ ಉಪಚುನಾವಣೆ ಇದೊಂದು ಧರ್ಮಯುದ್ಧ. ಈ ಧರ್ಮಯುದ್ಧದಲ್ಲಿ ಗೆಲುವು ಶತಸಿದ್ಧವಾಗಿದೆ. ಹಿಂದೂಗಳಿಗಾಗಿ ಇರುವ ಏಕೈಕ ರಾಷ್ಟ್ರ ಭಾರತ. ಗರ್ವದಿಂದ ವಂದೇ ಮಾತರಂ ಹೇಳುವವರು ಬಿಜೆಪಿ ಕಾರ್ಯಕರ್ತರು ಮಾತ್ರ ಅದು ನಮ್ಮ ಹೆಮ್ಮೆ. ಬಿಜೆಪಿಯವರು ಮುಸ್ಲಿಂ ವಿರೋಧಿಗಳಲ್ಲ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಕೇವಲ ತನ್ನ ವೋಟ್‌ ಬ್ಯಾಂಕ್‌ ಮಾಡಿಕೊಂಡಿದ್ದಾರೆಯೇ ಹೊರತು ಅವರಿಗಾಗಿ ನೀಡಿರುವ ಕೋಡುಗೆ ಶೂನ್ಯ ಎಂದರು.ಚುನಾವಣೆ ಉಸ್ತುವಾರಿ ಅರುಣ ಶಹಾಪುರ ಮಾತನಾಡಿ, ಬಾಗಲಕೋಟೆ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಆ ಸಾಮರ್ಥ್ಯ ಬಿಜೆಪಿ ಕಾರ್ಯಕರ್ತರಿಗಿದೆ. ಬಾಗಲಕೋಟೆ ಸರ್ವಾಂಗೀಣ ಅಭಿವೃದ್ಧಿ ಕಾಣಲು ಬಿಜೆಪಿ ಸರಕಾರ ಹಾಗೂ ಶಾಸಕರಾಗಿದ್ದ ಡಾ.ವೀರಣ್ಣ ಚರಂತಿಮಠ ಅವರು ಕಾರಣ, ಬಾಗಲಕೋಟೆ ಜನತಗೆ ತಮ್ಮ ಸುರಕ್ಷತೆ ಹಾಗೂ ಅಭಿವೃದ್ಧಿಯ ಅರಿವು ಇದೆ. ಹೀಗಾಗಿ ಅವರು ಬಿಜೆಪಿಯನ್ನು ಖಂಡಿತ ಬೆಂಬಲಿಸಲಿದ್ದಾರೆ. 2028ರ ಚುನಾವಣೆಗೆ ಶ್ರೀಕಾರವೇ ಬಾಗಲಕೋಟೆ ಉಪಚುನಾವಣೆ ಎಂದು ಅಭಿಪ್ರಾಯಪಟ್ಟರು.ಬೈಲಹೊಂಗಲದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ, ಅಭಿವೃದ್ಧಿ ಇಲ್ಲದ ಹಗರಣಗಳ ಸರಕಾರವಾಗಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಡಾ.ಕೆ.ಬಸವರಾಜ ಕ್ಯಾವಟರ್, ಸುಭಾಸ ಪಾಟೀಲ, ಬಸವರಾಜ ಯಂಕಂಚಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಮಲ್ಲೇಶ ವೈಜಾಪುರ, ಕಲ್ಲಪ್ಪ ಭಗವತಿ, ಉಮೇಶ ಹಂಚಿನಾಳ ಇತರರು ವೇದಿಕೆ ಮೇಲಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ವಿಸ್ತಾರಕರು ಸೇರಿದಂತೆ 500ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.