ಸಾರಾಂಶ
ಸೋಮವಾರ ಕಲಬುರಗಿ ಭೇಟಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಳಗ್ಗೆಯೇ 1 ಗಂಟೆ ಕಾಲ ಹಲವು ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ತಮ್ಮ ಅಭಿನಂದನಾ ಸಮಾರಂಭ ಹಾಗೂ ಸ್ಥಳೀಯ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಮವಾರ ಕಲಬುರಗಿ ಭೇಟಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಳಗ್ಗೆಯೇ 1 ಗಂಟೆ ಕಾಲ ಹಲವು ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿ ಗಮನ ಸೆಳೆದರು.ಮೊದಲು ವಿಜಯೇಂದ್ರ ಜಿಲ್ಲಾಧ್ಯಕ್ಷ ಆಕಾಂಕ್ಷಿಯಾಗಿದ್ದ , ಕೊನೆಗೆ ಅಧ್ಯಕ್ಷ ಪಟ್ಟ ಕೈ ತಪ್ಪಿದ್ದಂತಹ ಅವಣ್ಣ ಮ್ಯಾಕೆರಿ ಮನೆಗೆ ಭೇಟಿ ನೀಡಿ ಉಪಹಾರ ಸೇವನೆ ಮಾಡಿದರು. ಮ್ಯಾಕೇರಿಯವರಿಗೆ ಕೊನೆ ಗಳಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ಮ್ಯಾಕೇರಿ ಅಸಮಾಧಾನದಲ್ಲಿಯೂ ಇದ್ದರೂ. ಇದನ್ನರಿತಿದ್ದ ವಿಜಯೇಂದ್ರ ಅವರು ಅವಣ್ಣ ಮ್ಯಾಕೆರಿ ಮನೆಗೆ ಬೆಳಗಿನ ಉಪಹಾರಕ್ಕೆ ಹೋಗಿ ಬಂದರಲ್ಲದೆ ಅಲ್ಲೇ ಪಕ್ಷ ಸಂಘಟನೆ ಬಗ್ಗೆ ವಿಸ್ತೃತ ಚರ್ಚೆಯನ್ನೂ ನಡೆಸಿದರು ಎಂದು ಗೊತ್ತಾಗಿದೆ.
ಇದಲ್ಲದೆ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಂಸದ ಬಸವರಾಜ್ ಪಾಟೀಲ್ ಸೇಡಂ ಮನೆಗೂ ವಿಜಯೇಂದ್ರ ಭೇಟಿ ನೀಡಿ ಕಾಲಿಗೆ ಬಿದ್ದು ಆಶಿರ್ವಾದ ಪಡೆದರು. ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರ ಅನುಭವ ಪಡೆದುಕೊಂಡರು. ಬಸವರಾಜ ಪಾಟೀಲರು ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಅನುಭವಗಳನ್ನು ವಿಜಯೇಂದ್ರ ಜೊತೆಗೆ ಹಂಚಿಕೊಂಡು ಶುಭ ಕೋರಿದರು.