ರಾಮನಗರ: ಕೆರೆ ಮಣ್ಣನ್ನು ಜಮೀನಿಗೆ ಸಾಗಿಸಿದ್ದಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿ ₹7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಪಡೆಯುತ್ತಿದ್ದ ಬಿಡದಿ ಹೋಬಳಿಯ ಕೆಂಚನಕುಪ್ಪೆ ವೃತ್ತ ಮತ್ತು ಮಾಯಗಾನಹಳ್ಳಿ ವೃತ್ತದ (ಪ್ರಭಾರ) ಗ್ರಾಮ ಲೆಕ್ಕಾಧಿಕಾರಿ ಎಸ್.ವಿ.ಚೇತನ್ ಮತ್ತು ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಹಾಯಕ ವೆಂಕಟರಮಣ ಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚನ್ನಪಟ್ಟಣದ ಶಾಂತಕುಮಾರ್ ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಮಾಯಗಾನಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಶಾಂತಕುಮಾರ್ ಜಮೀನು ಹೊಂದಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಜಮೀನಿನ ಮಣ್ಣು ಕೊಚ್ಚಿ ಹೋಗಿತ್ತು. ಕೃಷಿ ಉದ್ದೇಶಕ್ಕಾಗಿ ಪಕ್ಕದ ಕೆರೆ ಮಣ್ಣನ್ನು ಅವರು ಜಮೀನಿಗೆ ಸಾಗಿಸಿ ಸಮತಟ್ಟು ಮಾಡಿಸಿದ್ದರು.ಅದರ ವಿಡಿಯೊ ಸಂಗ್ರಹಿಸಿದ್ದ ಚೇತನ್, ಕೆರೆ ಮಣ್ಣು ಸಾಗಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಹಾಗೆ ಮಾಡಬಾರದೆಂದರೆ ₹7 ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆ ಪೈಕಿ ₹2 ಸಾವಿರವನ್ನು ಫೋನ್ಪೇ ಮೂಲಕ ಪಡೆದಿದ್ದರು. ಉಳಿದ ಮೊತ್ತ ಸಂಗ್ರಹಿಸಲು ಗ್ರಾಮ ಸಹಾಯಕನನ್ನು ಕಳಿಸಿದ್ದರು.
ಈ ಕುರಿತು ಶಾಂತಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಭಾನುವಾರ ಮಧ್ಯಾಹ್ನ ಮಾಯಗಾನಹಳ್ಳಿಯಲ್ಲಿ ವೆಂಕಟರಮಣ ₹5 ಸಾವಿರ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ತಂಡ ದಾಳಿ ನಡೆಸಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಿತು. ನಂತರ, ಲಂಚದ ಸೂತ್ರಧಾರ ಚೇತನ್ ಅವರನ್ನು ಬಂಧಿಸಲಾಯಿತು.ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹಾ ಅವರ ಮಾರ್ಗದರ್ಶನ ಮತ್ತು ಡಿವೈಎಸ್ಪಿ ಶಿವಪ್ರಸಾದ್ ಮೇಲ್ವಿಚಾರಣೆಯಲ್ಲಿ ಇನ್ಸ್ ಪೆಕ್ಟರ್ ಗಳಾದ ಎಂ.ಶ್ರೀಕುಮಾರ್ , ಬಿ.ಎನ್.ಸಂದೀಪ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.