ಜಾತ್ರೆಯ ಮೊದಲ ದಿನವೇ ಮುಂಜಾನೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಊರೊಳಗಿನ ಮಲ್ಲಿಗೆಮ್ಮ ದೇವಸ್ಥಾನದಲ್ಲಿ ದೇವಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನಡೆದವು. ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಮಹಾಮಂಗಳಾರತಿಯ ನಂತರ ಭಕ್ತರು ಮನೆಯಿಂದಲೇ ಭಕ್ತಿಭಾವದಿಂದ ತಯಾರಿಸಿಕೊಂಡು ಬಂದಿದ್ದ ಪಾಯಸ, ಹೋಳಿಗೆ ಹಾಗೂ ವಿವಿಧ ಸಿಹಿ ನೈವೇದ್ಯಗಳನ್ನು ದೇವಿಗೆ ಸಮರ್ಪಿಸಿದರು. ಬಳಿಕ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ಹಂಚಿ ಭಕ್ತಿ ಸಮರ್ಪಣೆ ಸಲ್ಲಿಸಿದ ದೃಶ್ಯ ದೇವಾಲಯದ ಆವರಣದಲ್ಲಿ ಕಂಡುಬಂತು.

ಕನ್ನಡಪ್ರಭ ವಾರ್ತೆ ಅರಸೀಕೆರೆನಗರದ ಅಧಿದೇವತೆಗಳೆಂದೇ ಪೂಜಿಸಲ್ಪಡುವ ಶ್ರೀ ಕರಿಯಮ್ಮ ಹಾಗೂ ಶ್ರೀ ಮಲ್ಲಿಗೆಮ್ಮ ದೇವಿಯರ 57ನೇ ವರ್ಷದ ಜಾತ್ರಾ ಮಹೋತ್ಸವವು ಧಾರ್ಮಿಕ ವೈಭವ ಮತ್ತು ಭಕ್ತಿಭಾವದ ಮಧ್ಯೆ ಆರಂಭಗೊಂಡಿದ್ದು, ನಗರದೆಲ್ಲೆಡೆ ಜಾತ್ರೆಯ ಸಂಭ್ರಮ ಮನೆಮಾಡಿದೆ.

ಜಾತ್ರೆಯ ಮೊದಲ ದಿನವೇ ಮುಂಜಾನೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಊರೊಳಗಿನ ಮಲ್ಲಿಗೆಮ್ಮ ದೇವಸ್ಥಾನದಲ್ಲಿ ದೇವಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನಡೆದವು. ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಮಹಾಮಂಗಳಾರತಿಯ ನಂತರ ಭಕ್ತರು ಮನೆಯಿಂದಲೇ ಭಕ್ತಿಭಾವದಿಂದ ತಯಾರಿಸಿಕೊಂಡು ಬಂದಿದ್ದ ಪಾಯಸ, ಹೋಳಿಗೆ ಹಾಗೂ ವಿವಿಧ ಸಿಹಿ ನೈವೇದ್ಯಗಳನ್ನು ದೇವಿಗೆ ಸಮರ್ಪಿಸಿದರು. ಬಳಿಕ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ಹಂಚಿ ಭಕ್ತಿ ಸಮರ್ಪಣೆ ಸಲ್ಲಿಸಿದ ದೃಶ್ಯ ದೇವಾಲಯದ ಆವರಣದಲ್ಲಿ ಕಂಡುಬಂತು.ನಾಳೆ ಉತ್ಸವ ಬಾನ ನೈವೇದ್ಯ:ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ಸಂಜೆ ಊರೊಳಗಿನ ಮಲ್ಲಿಗೆಮ್ಮ ದೇವಸ್ಥಾನದಿಂದ ಕೆಂಚರಾಯ ದೂತರಾಯ, ಚೆಲುವರಾಯಸ್ವಾಮಿ ಸಮೇತ ಕರಿಯಮ್ಮ ಮತ್ತು ಮಲ್ಲಿಗೆಮ್ಮ ದೇವಿಯರ ಉತ್ಸವ ಮೆರವಣಿಗೆ ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಉತ್ಸವ ಸಾಗುವ ಮಾರ್ಗಗಳು ಹಾಗೂ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಿಸಲಾಗಿದ್ದು, ನಗರವೆಲ್ಲ ಹಬ್ಬದ ಕಳೆಗೈದಿದೆ. ರಾತ್ರಿ ಉತ್ಸವವು ಕರಿಯಮ್ಮ ದೇವಿಯ ದೇವಾಲಯ ತಲುಪಿದ ಬಳಿಕ ಕರಿಯಮ್ಮ ದೇವಿ, ಕೆಂಚರಾಯಸ್ವಾಮಿ, ದೂತರಾಯಸ್ವಾಮಿ ಸೇರಿದಂತೆ ಪರಿವಾರ ದೇವತೆಗಳಿಗೆ ವಿಶೇಷ ಬಾನ ನೈವೇದ್ಯ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಾಲಯ ಅಭಿವೃದ್ಧಿ ಸಮಿತಿ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.14ರಂದು ಮಹಾರಥೋತ್ಸವಜಾತ್ರಾ ಮಹೋತ್ಸವದ ಭಾಗವಾಗಿ ಮೇ 13ರಂದು ಗಂಗಸ್ಥಾನ ಕಾರ್ಯಕ್ರಮ ನಡೆಯಲಿದ್ದು, ಮೇ 14ರಂದು ಮಧ್ಯಾಹ್ನ ಗ್ರಾಮದೇವತೆಗಳ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಭಕ್ತರ ಸೇವೆಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಆಚರಣೆ ಸಮಿತಿ ತಿಳಿಸಿದೆ.ಕೆಂಗಲ್ ಸಿದ್ಧೇಶ್ವರ ಸ್ವಾಮಿಗೆ 101 ಎಡೆ ಸೇವೆ:ಇಂದು ರಾತ್ರಿ ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗೆಮ್ಮ ದೇವಿಯರ ಸಾನ್ನಿಧ್ಯದಲ್ಲಿ ಹಾಗೂ ಮೂರು ಕಳಸ ಮಠದ ಸಿದ್ಧರಾಮೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಕೆಂಗಲ್ ಸಿದ್ಧೇಶ್ವರ ಸ್ವಾಮಿಗೆ ಭಕ್ತರು ಭಕ್ತಿ ಪೂರ್ವಕವಾಗಿ 101 ಎಡೆ ಸೇವೆ ಸಲ್ಲಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.