ಕೆಸರುಮಯವಾಗಿದ್ದ ಊರನ್ನು ಸ್ವಚ್ಛಗೊಳಿಸಿದ ಗ್ರಾಮಸ್ಥರು

| Published : Jun 18 2025, 01:40 AM IST

ಕೆಸರುಮಯವಾಗಿದ್ದ ಊರನ್ನು ಸ್ವಚ್ಛಗೊಳಿಸಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಮೊನ್ನೆ ಸುರಿದ ಭೀಕರ ಮಳೆಗೆ ಶಾಲೆ, ಮನೆ, ಓಣಿ ಸೇರಿ ಕೆಸರುಮಯವಾಗಿದ್ದ ಊರನ್ನು ತಾಲೂಕಿನ ಹಂಗರಗಿ ಗ್ರಾಮಸ್ಥರು ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

ಕನ್ನಡಪ್ರಭ ವಾರ್ತೆ, ಗುಳೇದಗುಡ್ಡ

ಮೊನ್ನೆ ಸುರಿದ ಭೀಕರ ಮಳೆಗೆ ಶಾಲೆ, ಮನೆ, ಓಣಿ ಸೇರಿ ಕೆಸರುಮಯವಾಗಿದ್ದ ಊರನ್ನು ತಾಲೂಕಿನ ಹಂಗರಗಿ ಗ್ರಾಮಸ್ಥರು ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

ಎರಡು ದಿನ ಸುರಿದ ಅಬ್ಬರದ ಮಳೆಗೆ ಊರಿನ ಬಹುತೇಕ ಮಾಳಗಿ ಮನೆಗಳು ಸೋರಿದ್ದವು. ತಗ್ಗು ಪ್ರದೇಶವೆಲ್ಲ ಕೆರೆಯಂತಾಗಿತ್ತು. ಊರ ಮುಂದಿನ ಚರಂಡಿ ಕಟ್ಟಿ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೀರು ಹೊಕ್ಕಿತ್ತು. ಗ್ರಾಮದ ಮುಖ್ಯ ರಸ್ತೆಯ ಇಕ್ಕೆಲದ ಮನೆಗಳಿಗೂ ನೀರು ನುಗ್ಗಿ ಹೈರಾಣ ಮಾಡಿತ್ತು.

ಜನಜೀವನ ಅಸ್ತವ್ಯಸ್ತ:

ಮಳೆ ನಿಂತರೂ ಹರಿದುಹೋದ ನೀರು ಬಿಟ್ಟು ಹೋಗಿದ್ದ ಕೆಸರು ಎರಡು ದಿನಗಳ ಕಾಲ ಗ್ರಾಮಸ್ಥರ ಜನಜೀವನವನ್ನು ದುಸ್ತರಗೊಳಿಸಿತ್ತು. ಓಡಾಡುವುದು ದೂರವಿರಲಿ, ನಡೆದಾಡುವುದೇ ಕಷ್ಟವಾಗಿತ್ತು. ಮನೆಯಲ್ಲೇ ಮೂಗು ಮುಚ್ಚಿಕೊಂಡು ಇರುವ ಪರಿಸ್ಥಿತಿ ನಿರ್ಮಿಸಿತ್ತು.

ಸ್ವಚ್ಛತೆಗಾಗಿ ಗ್ರಾಮ ಪಂಚಾಯತಿಯ ದಾರಿ ಕಾಯದೇ ಗ್ರಾಮದ ಹಿರಿಯರು, ಉತ್ಸಾಹಿ ಯುವಕರು ಒಗ್ಗೂಡಿ ಸಲಿಕೆ, ಬುಟ್ಟಿ, ಕಸಬರಿಗೆ ಹಿಡಿದು ಗ್ರಾಮವನ್ನು ಸ್ವಚ್ಛಗೊಳಿಸಿದರು.‌ ಜನರಿಂದ ಅಸಾಧ್ಯ ಎಂದಲ್ಲಿ ಜೆಸಿಬಿ ಬಳಸಿದರು. ದುರ್ವಾಸನೆ ಬೀರುತ್ತಿದ್ದ ಕೆಸರನ್ನು ಯಾವುದೇ ಮುಜುಗರ ಇಲ್ಲದೇ ಹೊತ್ತು ಸಾಗಿಸಿದರು.

ಶಾಲೆಗೆ ಕಾಯಕಲ್ಪ:

ನೀರು ನುಗ್ಗಿದ್ದ ಶಾಲೆಯ ಆವರಣಕ್ಕೆ ಹತ್ತಾರು ಟ್ರ್ಯಾಕ್ಟರ್‌ ಇಟ್ಟಿಗೆ ಭಟ್ಟಿಗಳ ವೇಸ್ಟ್‌ ತುಂಬಿಸಿ ಸಮತಟ್ಟುಗೊಳಿಸಿದರು. ಶಾಲೆಯ ಸುತ್ತ ಇದ್ದ ಕಲ್ಲು, ಕಟ್ಟಿಗೆ ತೆರವುಗೊಳಿಸಿದಾಗ ವಿಶಾಲ ರಸ್ತೆಯ ಅನಾವರಣವಾಯಿತು.

ಗದಗಿನ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಿಂದ ಗ್ರಾಮ ಫೆಲೋಶಿಪ್‌ಗೆ ಈ ಗ್ರಾಮ ಆಯ್ಕೆಯಾಗಿ, ಗ್ರಾಮ ವಿಕಾಸ ಸಮಿತಿ ರಚನೆಯಾಗಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಈ ಭೀಕರ ಮಳೆ, ಅಪಾರ ಕೆಸರು ಈ ಸಮಿತಿಯನ್ನು ಕ್ರೀಯಾಶೀಲ ಆಗುವಂತೆ ಮಾಡಿತ್ತು. ಆ ನೆಪದಲ್ಲಿ ಇಡೀ ಊರಿನ ಹಿರಿಯರು, ಪ್ರಮುಖರು, ಯುವಕರು ಶ್ರಮದಾನ ಮಾಡುವ ಮೂಲಕ ಕೆಸರು ಹೊತ್ತು ಹಾಕಿ ಸ್ವಾಭಿಮಾನ, ಸ್ವಾವಲಂಬನೆಯ ಸಂದೇಶ ರವಾನಿಸಿದರು.ಶ್ರಮದಾನದ ಬಳಿಕ ಒಟ್ಟಾಗಿ ಕುಳಿತು ಮಂಡಕ್ಕಿ ಸೂಸಲ ಸವಿದರು.

ಬಾದಾಮಿ ತಾಪಂ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ, ಬಾದಾಮಿ ಎಪಿಎಂಸಿ ಮಾಜಿ ಸದಸ್ಯ ಪ್ರಕಾಶ ಮೇಟಿ, ಗ್ರಾಪಂ ಸದಸ್ಯರಾದ ಮಲ್ಲಪ್ಪ ಕುರಿ, ಫಕ್ಕೀರಪ್ಪ ಉಗಲವಾಟ, ಹನುಮಂತ ಬಿಳೇಕಲ್‌ ಹಾಗೂ ಹಿರಿಯರಾದ ಸುಭಾಷ ಘಂಟಿ, ಮಲ್ಲಿಕಾರ್ಜುನ ಸಿದ್ದಣ್ಣವರ, ಬಸವರಾಜ ಹಾನಾಪುರ, ರವಿ ಹೊಸಮನಿ, ಮಂಜುನಾಥ ಹೊಸಮನಿ, ಶಶಿ ಕಂಬಳಿ, ಮುತ್ತಣ್ಣ ಘಂಟಿ, ಬಸವರಾಜ ಘಂಟಿ, ರಂಗಪ್ಪ ತಿಮ್ಮಣ್ಣವರ, ಸುರೇಶ ಕೋಟಿ, ಯಲ್ಲಪ್ಪ ಅನವಾಲ, ಹನುಮಂತ ಅನವಾಲ, ಮಾರುತಿ ಅನವಾಲ, ರವಿ ಆನೇಗುಂದಿ, ಮಹಾಂತೇಶ ಗೂಳಣ್ಣವರ, ಪ್ರೇಮಾ ಹೊಸಮನಿ, ರಮೇಶ ಲಮಾಣಿ, ಸ್ವಗ್ರಾಮ ಮಿತ್ರರಾಗಿ ಶ್ರೀಧರ ಮೇಟಿ, ಪ್ರಕಾಶ ಮಾದರ ಈ ಶ್ರಮದಾನದಲ್ಲಿ ಭಾಗವಹಿಸಿದ್ದರು.