ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಶಿವನೇಹಳ್ಳಿ ರಸ್ತೆಗೆ ಗ್ರಾಮಸ್ಥರೇ ಸ್ವಂತ ಹಣ ಹಾಕಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾದ ಘಟನೆ ಗುಬ್ಬಿ ತಾಲೂಕಿನ ಶಿವನೇಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿವನೇಹಳ್ಳಿ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಗಮನಕ್ಕೂ ತಂದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಶಿವನೇಹಳ್ಳಿ ಗ್ರಾಮಸ್ಥರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖಂಡ ರುದ್ರೇಶ್ ಮಾತನಾಡಿ, ಶಿವನೇಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಮಾಡದೇ ಹೋದರೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಊರಿಗೆ ಅಧಿಕಾರಿಗಳು ಶಾಸಕರು ಸಂಸದರು ಬಂದು ಅಶ್ವಾಸನೆ ಕೊಟ್ಟು ನಮ್ಮ ಹತ್ತಿರ ಮತ ಹಾಕಿಸಿಕೊಂಡು ಹೋದ ಮೇಲೆ ಇತ್ತ ಕಡೆ ತಿರುಗು ನೋಡಲ್ಲ ನಮ್ಮ ಊರಿನ ಮೇಲೆ ಮಲೆತಾಯಿ ಧೋರಣೆ ಮಾಡುತ್ತಿದ್ದಾರೆ. ಮಾಜಿ ಸಂಸದ ಜಿ.ಎಸ್. ಬಸವರಾಜು, ಅವರ ಸ್ವಂತ ಊರು ರಸ್ತೆ ಮಾಡಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಶಿವನೇಹಳ್ಳಿ ಗ್ರಾಮವಾಗಿದೆ. ನಮ್ಮೂರಿನ ಪಕ್ಕದ ಊರುಗಳೆಲ್ಲ ರಸ್ತೆಗಳು ಮಾಡುತ್ತಿದ್ದಾರೆ. ಆದರೆ ಶಿವನೇಹಳ್ಳಿ ಗ್ರಾಮಕ್ಕೆ ಯಾವುದೇ ರಸ್ತೆ ಅಭಿವೃದ್ದಿ ಮಾಡಿಲ್ಲ. ಶಿವನೇಹಳ್ಳಿ , ಜಕ್ಕನಹಳ್ಳಿ ಗ್ರಾಮಸ್ಥರು ಸ್ವಂತ ಹಣ ಹಾಕಿ ಶಿವನಹಳ್ಳಿಯಿಂದ ಜಕ್ಕನಹಳ್ಳಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಮುಚ್ಚುತ್ತಿದ್ದೇವೆ ಎಂದರು. ಶಿವನೇಹಳ್ಳಿ ಮಲ್ಲೇಶ್ ಮಾತನಾಡಿ, ಶಿವನೇಹಳ್ಳಿ ರಸ್ತೆ ಮಾಡಿ ಸುಮಾರು ದಶಕಗಳೇ ಕಳೆದಿದೆ ಕಿರಣ್ ಕುಮಾರ್ ಶಾಸಕರಾಗಿದ್ದಾಗ ಮಾಡಿದ ರಸ್ತೆ ಇದುವರೆಗೂ ಕೂಡ ಡಾಂಬರ್ ಕಂಡಿಲ್ಲ. ಸಾಕಷ್ಟು ಬಾರಿ ಈ ಭಾಗದ ಶಾಸಕರಿಗೆ ಮಾಜಿ ಸಂಸದ ಜಿಎಸ್ ಬಸವರಾಜ್ ಅವರಿಗೆ ಹಾಗೂ ವಿ. ಸೋಮಣ್ಣ ಅವರ ಗಮನಕ್ಕೂ ತಂದರು ಶಿವನೇಹಳ್ಳಿ ರಸ್ತೆ ಅಭಿವೃದ್ಧಿ ಕಡೆ ಯಾರು ಕೂಡ ಗಮನ ಹರಿಸುತ್ತಿಲ್ಲ ಆದ್ದರಿಂದ ಗ್ರಾಮಸ್ಥರೇ ಸ್ವಂತ ಹಣಹಾಕಿ ಶಿವನೇಹಳ್ಳಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ. ಅಧಿಕಾರಿಗಳಿಗೆ ನಾಚಿಗೆ ಆಗಬೇಕು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ರಸ್ತೆಯನ್ನು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಇದೇ ಜಯಣ್ಣ, ವೀರಭದ್ರಯ್ಯ, ಪಂಚಾಕ್ಷರಿ, ಮನೋಹರ್, ಕಿರಣ್, ವಿರೂಪಾಕ್ಷಿ, ಕುಮಾರ್ , ಮೋಹನ್ ಶಿವನೇಹಳ್ಳಿ ಹಾಗೂ ಜಕ್ಕನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.