ಸಾರಾಂಶ
ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರ ಒತ್ತಾಯ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಮಜರೆ ಗೊಲ್ಲರಹಟ್ಟಿ ಗ್ರಾಮ ತಿಪಟೂರು ನಗರಕ್ಕೆ ಹೊಂದಿಕೊಂಡಂತಿದ್ದು, ಸುಮಾರು ೫೦ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಈವರೆಗೂ ಉತ್ತಮ ರಸ್ತೆ ಸೌಕರ್ಯವಿಲ್ಲದೆ ಪರದಾಡುವಂತಾಗಿದ್ದು ಕೂಡಲೆ ರಸ್ತೆ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಪವನ್ಕುಮಾರ್ಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಕಾಡುಗೊಲ್ಲ ಸಮಾಜದ ಮುಖಂಡ ಪ್ರಕಾಶ್ ಯಾದವ್ ಮಾತನಾಡಿ, ಶಾಲಾ ಮಕ್ಕಳು ರಸ್ತೆ ಇಲ್ಲದೆ ಸುಮಾರು ಮೂರ್ನಾಲ್ಕು ಕಿಲೋಮೀಟರ್ ಬಳಸಿಕೊಂಡು ನಗರದ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಿದೆ. ಅಂಗವಿಕಲರು, ವಯೋವೃದ್ದರ ಸ್ಥಿತಿ ಹೇಳತೀರದಾಗಿದೆ. ಗೊಲ್ಲರಹಟ್ಟಿಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದರೆ ಆ್ಯಂಬುಲೆನ್ಸ್ ಬರುವುದಕ್ಕೂ ರಸ್ತೆ ಇಲ್ಲ. ಸರ್ಕಾರ ಕೂಡಲೇ ರಸ್ತೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು. ಗ್ರಾಮದ ಮುಖಂಡ ಹೊನ್ನಪ್ಪ ಮಾತನಾಡಿ ಕಂಚ್ಚಾಘಟ್ಟ ಗೊಲ್ಲರಹಟ್ಟಿ ಗ್ರಾಮಕ್ಕೆ ರಸ್ತೆಯೇ ಇಲ್ಲ. ಎತ್ತಿನಹೊಳೆ ಕಾಮಗಾರಿಯಿಂದ ಇದ್ದ ಮಣ್ಣಿನ ರಸ್ತೆಯೂ ಹಾಳಾಗಿದೆ. ಹಾಗಾಗಿ ಗ್ರಾಮಕ್ಕೆ ಇರುವ ನಕಾಶೆ ರಸ್ತೆಯನ್ನು ಗುರ್ತಿಸಿಕೊಡಬೇಕು. ಈ ಬಗ್ಗೆ ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲ. ಗ್ರಾಮಕ್ಕೆ ಇರುವ ಬಂಡಿದಾರಿ ಮಳೆಯಿಂದ ಗುಂಡಿ ಬಿದ್ದು ಕೆಸರು ಮಯವಾಗಿದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು, ವೃದ್ದರು, ಬೈಕ್ ಸವಾರರು ಎದ್ದು ಬಿದ್ದು ಹೋಗುವಂತಾಗಿದೆ. ತಾಲೂಕು ಆಡಳಿತ ಕೂಡಲೇ ಕಂಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮಸ್ಥರಾದ ಜಯಣ್ಣ, ಶಂಕರಪ್ಪ, ರಾಜಣ್ಣ, ರಮೇಶ್, ಬಸವರಾಜು ಮತ್ತಿತರರಿದ್ದರು.