ನಾಪೋಕ್ಲು-ಕೊಡವ ಸಮಾಜ-ಅಜ್ಜಿಮುಟ್ಟ-ಕುರುಳಿ ರಸ್ತೆಯನ್ನು ವಿಸ್ತರಿಸುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಇದನ್ನು ವಿರೋಧಿಸಿ ಶನಿವಾರ ಇಲ್ಲಿನ ಕೊಡವ ಸಮಾಜದಲ್ಲಿ ಗ್ರಾಮಸ್ಥರು ಹಾಗೂ ಭೂಮಾಲೀಕರ ಸಭೆ ನಡೆಯಿತು.
ಕನ್ನಡಪ್ರಭವಾರ್ತೆ ನಾಪೋಕ್ಲು
ನಾಪೋಕ್ಲು-ಕೊಡವ ಸಮಾಜ-ಅಜ್ಜಿಮುಟ್ಟ-ಕುರುಳಿ ರಸ್ತೆಯನ್ನು ವಿಸ್ತರಿಸುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಇದನ್ನು ವಿರೋಧಿಸಿ ಶನಿವಾರ ಇಲ್ಲಿನ ಕೊಡವ ಸಮಾಜದಲ್ಲಿ ಗ್ರಾಮಸ್ಥರು ಹಾಗೂ ಭೂಮಾಲೀಕರ ಸಭೆ ನಡೆಯಿತು.ಮಂಗಳೂರಿನ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ವಿಷಯ ಪ್ರಸ್ತಾಪಿಸಿದ ಕಂಗಂಡ ಜಾಲಿ ಪೂವಪ್ಪ, ಪ್ರಸ್ತುತ ಸುಮಾರು 15 ಅಡಿ ಅಗಲವಿರುವ ರಸ್ತೆಯನ್ನು ಮತ್ತೊಮ್ಮೆ ಅಗಲೀಕರಣ ಮಾಡುವ ಅಗತ್ಯವಿಲ್ಲ ಎಂದರು. ನಾಪೋಕ್ಲಿನಿಂದ ಕೊಡವ ಸಮಾಜ, ಅಜ್ಜಿಮುಟ್ಟ ಹಾಗೂ ಕುರುಳಿ ಮಾರ್ಗವಾಗಿ ಎಮ್ಮೆಮಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಮಾರು 25 ಅಡಿ ಅಗಲಕ್ಕೆ ವಿಸ್ತರಿಸುವ ಪ್ರಸ್ತಾವನೆಗೆ ನಮ್ಮ ತೀವ್ರ ವಿರೋಧವಿದೆ ಎಂದರು. ಇದಕ್ಕೆನೆರೆದಿದ್ದ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ರಸ್ತೆ ವಿಸ್ತರಣೆ ಮಾಡುವುದು ತಪ್ಪಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆ ಮಾಡಲೀಕರಣ ಮಾಡಲು ಹೊರಟಿರುವುದರಿಂದ ಸಮಸ್ಯೆಯಾಗುತ್ತಿದೆ. ಈಗಿರುವ ರಸ್ತೆಯೇ ಉತ್ತಮ ಗುಣಮಟ್ಟದಿಂದ ಕೂಡಿದೆ. ರಸ್ತೆ ವಿಸ್ತರಣೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಪ್ರಸ್ತುತ ಸುಮಾರು 15 ಅಡಿ ಅಗಲವಿರುವ ರಸ್ತೆ ಸ್ಥಳೀಯ ಸಂಚಾರಕ್ಕೆ ಸಾಕಷ್ಟಿದೆ. ಈ ರಸ್ತೆಯನ್ನು ಅಗಲೀಕರಣ ಮಾಡುವ ಅಗತ್ಯವಿಲ್ಲ. ಉತ್ತಮ ಗುಣಮಟ್ಟದ ಡಾಂಬರು ಅಥವಾ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರ ಅಗತ್ಯವನ್ನು ಸಮರ್ಪಕವಾಗಿ ಪೂರೈಸಬಹುದು. ಅನಗತ್ಯ ರಸ್ತೆ ಅಗಲೀಕರಣಕ್ಕಾಗಿ ನಮ್ಮ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.ರಸ್ತೆ ಅಗಲೀಕರಣದ ಪ್ರಸ್ತಾವನೆ ಕೈಬಿಟ್ಟು, ಯಾವುದೇ ಹೆಚ್ಚುವರಿ ಭೂಸ್ವಾಧೀನ ಮಾಡದೆ ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ಮೂಡಿಬಂತು. ಈ ಯೋಜನೆಯಿಂದ ನೇರವಾಗಿ ಪರಿಣಾಮ ಬೀರುವ ಭೂಮಾಲೀಕರೊಂದಿಗೆ ಸಮಾಲೋಚನೆ ನಡೆಸದೆ ಈ ಪ್ರಸ್ತಾವನೆ ಮಾಡಲಾಗಿದ್ದು ಕೂಡಲೇ ಯೋಜನೆ ಕೈಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಶಿವಚಾಳಿಯಂಡ ಸಹದೇವ, ಬೊಪ್ಪಂಡ ಕುಶಾಲಪ್ಪ, ಬೊಪ್ಪಂಡ ಶೈಲಾ ಬೋಪಯ್ಯ, ಪಾಡಿಯಮ್ಮಂಡ ಪಾಲಾಕ್ಷ, ಕೇಲೇಟಿರ ಗಣಪತಿ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕಂಗಂಡ, ಅರೆಯಡ, ಕೇಲೇಟಿರ, ಶಿವಚಾಳಿಯಂಡ, ಬೊಪ್ಪಂಡ, ಪಾಡಿ, ಯಮ್ಮಂಡ ಕುಟುಂಬಸ್ಥರು ಮತ್ತಿತರರು ಪಾಲ್ಗೊಂಡಿದ್ದರು.