ದಾವಣಗೆರೆ ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಫೆ.24 ಮತ್ತು 25ರಂದು ಅದ್ಧೂರಿಯಾಗಿ ನಡೆಯಲಿದೆ. ಜಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ. ದಾಸಕರಿಯಪ್ಪ ಹೇಳಿದ್ದಾರೆ.

- ಸಕಲ ಸಿದ್ಧತೆ ನಡೆದಿದ್ದು, ಇಂದು ವಿದ್ಯುಕ್ತ ಚಾಲನೆ: ಶ್ರೀನಿವಾಸ ದಾಸಕರಿಯಪ್ಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಫೆ.24 ಮತ್ತು 25ರಂದು ಅದ್ಧೂರಿಯಾಗಿ ನಡೆಯಲಿದೆ. ಜಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ. ದಾಸಕರಿಯಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ದಿನಗಳ ಜಾತ್ರಾ ಮಹೋತ್ಸವಕ್ಕೆ ಫೆ.22ರಂದು ಸಾರು ಹಾಕಲಾಗುವುದು. ಇದರೊಂದಿಗೆ ಜಾತ್ರಾ ಕಾರ್ಯಗಳು ವಿದ್ಯುಕ್ತವಾಗಿ ಆರಂಭಗೊಳ್ಳಲಿವೆ. 24ರ ಸಂಜೆ ರಾಜ್ಯ ವಿವಿಧ ಜಿಲ್ಲೆಗಳ ಕಲಾ ತಂಡಗಳೊಂದಿಗೆ ಶ್ರೀ ಚೌಡೇಶ್ವರಿ ದೇವಿಯ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಸಾಗಲಿದೆ. ಫೆ.25ರ ಬೆಳಗ್ಗೆ ದೇವಿ ದೇವಸ್ಥಾನದಲ್ಲಿ ಆಸೀನರಾದ ನಂತರ ಬೆಳಗ್ಗೆ 8 ಗಂಟೆಗೆ ಚರಗ ಕಾರ್ಯಕ್ರಮವಿದೆ. ಫೆ.26ರಿಂದ ಮಾ.2 ರವರೆಗೆ ನಿತ್ಯವೂ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.

ಹಳೇ ದಾವಣಗೆರೆ ದುಗ್ಗಮ್ಮನ ಜಾತ್ರೆಯಂತೆಯೇ ಹೊಸ ದಾವಣಗೆರೆಯಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಪ್ರಸಿದ್ಧಿ ಪಡೆದಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಭಕ್ತರು ಸೇವೆಯ ರೂಪದಲ್ಲಿ ಕಾಣಿಕೆ ನೀಡಿದ್ದು, ಅದನ್ನು ಜಾತ್ರಾ ಮಹೋತ್ಸವಕ್ಕೆ ವಿನಿಯೋಗಿಸಲಾಗುವುದು. ದೇವಸ್ಥಾನ ಆವರಣದಲ್ಲಿ ಯಾವುದೇ ಪ್ರಾಣಿಬಲಿ ನಡೆಯುವುದಿಲ್ಲ ಎಂದು ಶ್ರೀನಿವಾಸ ದಾಸಕರಿಯಪ್ಪ ಸ್ಪಷ್ಟಪಡಿಸಿದರು.

ಸಮಿತಿ ಉಪಾಧ್ಯಕ್ಷ ಡಿ.ಎಂ.ಕಾಂತರಾಜ, ಖಜಾಂಚಿ, ಯುವ ವಕೀಲ ಎಚ್.ದಿವಾಕರ, ಕಿರಣ್, ರಾಕೇಶ ಇತರರು ಇದ್ದರು.

- - -

* ನಾನೂ ಬಿಜೆಪಿ ಆಕಾಂಕ್ಷಿ: ಶ್ರೀನಿವಾಸ ದಾಸಕರಿಯಪ್ಪ ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದ ಟಿಕೆಟ್ ಸಿಗುವ ವಿಶ್ವಾಸ ನನಗೆ ಇದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು, ಅವಕಾಶ ನೀಡಿದರೆ ಸಮರ್ಥವಾಗಿ ಉಪ ಚುನಾವಣೆ ಎದುರಿಸಿ, ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ಒಂದುವೇಳೆ ಪಕ್ಷವು ಯಾರಿಗೇ ಟಿಕೆಟ್ ನೀಡಿದರೂ ಆ ಅಭ್ಯರ್ಥಿ ಪರವಾಗಿ, ಪಕ್ಷದ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ, ಗೆಲ್ಲಿಸುವ ಸಾಮರ್ಥ್ಯ ಯಾವುದಾದರೂ ಪಕ್ಷಕ್ಕೆ ಇದ್ದರೆ ಅದು ಬಿಜೆಪಿಗೆ ಮಾತ್ರ ಎಂದು ಹೇಳಿದರು.

ನಾನೂ ಟಿಕೆಟ್‌ ಆಕಾಂಕ್ಷಿ ಎಂಬುದನ್ನು, ನನ್ನ ಅಭಿಪ್ರಾಯವನ್ನು ರಾಜ್ಯದ ಯಾವ ನಾಯಕರ ಬಳಿಯೂ ತಿಳಿಸಿಲ್ಲ, ಪ್ರಸ್ತಾಪಿಸಿಲ್ಲ. ಮುಂದೆ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ಮಾಡಲಿದ್ದೇವೆ. ಬಣಗಳಿಗಿಂತಲೂ ಬಿಜೆಪಿ ದೊಡ್ಡದು. ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು, ಶಾಸಕರಾಗಲಿದ್ದಾರೆ. ಈ ಮೂಲಕ ದಕ್ಷಿಣ ಕ್ಷೇತ್ರವೂ ಬಿಜೆಪಿ ಪಾಲಾಗಲಿದೆ ಎಂಬ ವಿಶ್ವಾಸ ಶ್ರೀನಿವಾಸ ದಾಸಕರಿಯಪ್ಪ ವ್ಯಕ್ತಪಡಿಸಿದರು.

- - -

-20ಕೆಡಿವಿಜಿ1: ದಾವಣಗೆರೆಯಲ್ಲಿ ವಿನೋಬ ನಗರ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.