ಅಪ್ರಾಪ್ತರ ಮೇಲೆ ದೌರ್ಜನ್ಯ: 125 ಮಂದಿ ಜೈಲುಪಾಲು

| Published : Jun 14 2024, 01:00 AM IST

ಸಾರಾಂಶ

ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಲ್ಲೆಯ 125 ಮಂದಿ ಜೈಲು ಪಾಲಾಗಿದ್ದಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ನೂರುನ್ನೀಸಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಲ್ಲೆಯ 125 ಮಂದಿ ಜೈಲು ಪಾಲಾಗಿದ್ದಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ನೂರುನ್ನೀಸಾ ತಿಳಿಸಿದರು.ನಗರದ ವಿವಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಆನ್‌ಲೈನ್‌ನಲ್ಲಿ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ತಡೆಗಟ್ಟುವಿಕೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳನ್ನು ಮದುವೆಯಾಗಿ, ಲೈಂಗಿಕ ಸಂಬಂಧವಿಟ್ಟುಕೊಂಡರೆ ಅದು ಅತ್ಯಾಚಾರ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 400 ಮಂದಿ ಹೆಣ್ಣು ಮಕ್ಕಳು ಮದುವೆಯಾಗದೆಯೇ ಗರ್ಭಧರಿಸಿದ್ದಾರೆ. ಇವರಲ್ಲಿ ನಾಲ್ಕು ಮಂದಿ 10 ವರ್ಷದ ಮಕ್ಕಳಿರುವುದು ದುರದೃಷ್ಟಕರ ಸಂಗತಿ ಎಂದರು.ಪೋಕ್ಸೊ ಕಾಯ್ದೆಯಡಿ ಜಿಲ್ಲಾ ಕಾರಾಗೃಹದಲ್ಲಿರುವವರಲ್ಲಿ ಹೆಚ್ಚಿನ ಮಂದಿ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ತಂದೆ, ಅಣ್ಣ, ಶಿಕ್ಷಕರು, ಸ್ವಾಮೀಜಿಗಳಿದ್ದಾರೆ. ಎರಡೆರಡು ಬಾರಿ ಪೋಕ್ಸೊ ಕಾಯ್ದೆಯಡಿ ಜೈಲು ಪಾಲಾದವರಿದ್ದಾರೆ. ಜಿಲ್ಲೆಯ ಎರಡು ಕುಟುಂಬ ನ್ಯಾಯಾಲಯದಲ್ಲಿ ಒಟ್ಟು 6 ಸಾವಿರ ವಿಚ್ಛೇದನ ಪ್ರಕರಣಗಳು ಚಾಲ್ತಿಯಲ್ಲಿವೆ. ಇವೆಲ್ಲವೂ ಸಮಾಜದ ದುರಂತಗಳು ಎಂದು ಹೇಳಿದರು.ಸಂವಹನ ಮಾಧ್ಯಮಗಳಲ್ಲಿ ಅಪರಿಚಿತರಿಂದ ವಿಡಿಯೋ ಕರೆ ಸ್ವೀಕರಿಸುವಾಗ ಎಚ್ಚರವಿರಲಿ. ನೀವು ಅಶ್ಲೀಲ ಕರೆಯಲ್ಲಿರುವ ಥರ ಬಿಂಬಿಸಿ, ನಿಮ್ಮನ್ನು ಬೆದರಿಸಿ ಹಣ ವಸೂಲಿ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿರುವ ಫೋಟೋ ಬಳಸಿಕೊಂಡು, ಡೀಪ್‌ ಫೇಕ್‌ ತಂತ್ರಜ್ಞಾನ ಬಳಸಿ ಅಶ್ಲೀಲ ಚಿತ್ರ, ವಿಡಿಯೋಗಳಿಗೆ ಬಳಸಬಹುದು ಎಂದು ತಿಳಿಸಿದರು.ಫೆಕ್‌ ಚ್ಯಾಟ್ ಮಾಡುವುದು, ಫೆಕ್ ಖಾತೆಗಳನ್ನು ಬಳಸುವುದು, ಸಂಬಂಧ ದುರ್ಬಳಕೆ ಮಾಡಿಕೊಂಡು ಖಾಸಗಿ ಚಿತ್ರ, ವಿಡಿಯೋಗಳನ್ನು ಹಂಚುವುದು, ಟ್ರೋಲ್ ಮಾಡುವುದು, ಖಾತೆ ಹ್ಯಾಕ್ ಮಾಡುವುದು, ಖಾಸಗಿ ಬದುಕನ್ನು ಸೂಕ್ಷ್ಮವಾಗಿ ವೀಕ್ಷಿಸಿ, ಬೆದರಿಸುವುದು ಇವೆಲ್ಲವೂ ಸೈಬರ್ ಅಪರಾಧಗಳು. ಅಪರಾಧಿಗಳಿಗೆ 10 ಲಕ್ಷ ರು. ದಂಡ 7 ವರ್ಷದಿಂದ 20 ವರ್ಷದವರೆಗೂ ಸಜೆಯಾಗುತ್ತದೆ ಎಂದು ತಿಳಿಸಿದರು.ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ನಾಗರಿಕತೆ ಬೆಳೆದಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ, ತಂತ್ರಜ್ಞಾನ, ಆವಿಷ್ಕಾರಗಳಲ್ಲಿ ದೇಶ ಮುಂದುವರಿದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಲೇ ಇವೆ. ಮಾನಸಿಕವಾಗಿ ವಿದ್ಯಾವಂತರಾದಲ್ಲಿ, ಕಾನೂನಿನ ಮೇಲೆ ಗೌರವವಿದ್ದಲ್ಲಿ ಅಪರಾಧಗಳು ನಡೆಯುವುದಿಲ್ಲ. ಅಭಿವೃದ್ಧಿಗಾಗಿ ವ್ಯಯಿಸುವ ಹಣವನ್ನು ಅಪರಾಧಗಳ ತಡೆಗಟ್ಟಲು ಬಳಸುತ್ತಿರುವುದು ವಿಷಾದನೀಯ ಎಂದರು.ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಪ್ರೊ.ನೂರ್‌ಅಫ್ಜಾ, ಪ್ರೊ. ಬಿ. ಕರಿಯಣ್ಣ, ಪ್ರೊ.ಮೊನ್ಬಿಂದರ್‌ಕೌರ್, ಪ್ರೊ.ಎ. ಮೋಹನ್‌ರಾಮ್, ಡಾ.ಸುನಿತಾ ವಿ.ಗಾಣಿಗೇರ್ ಉಪಸ್ಥಿತರಿದ್ದರು.