ಪಾದಯಾತ್ರೆಯಿಂದ ಸದ್ಗುಣಗಳು ಮೈಗೂಡಲಿವೆ: ಶಿವಶಾಂತವೀರ ಸ್ವಾಮೀಜಿ

| Published : Mar 01 2024, 02:17 AM IST

ಪಾದಯಾತ್ರೆಯಿಂದ ಸದ್ಗುಣಗಳು ಮೈಗೂಡಲಿವೆ: ಶಿವಶಾಂತವೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 25 ವರ್ಷದಿಂದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಚನ್ನಗಿರಿ ತಾಲೂಕಿನಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಹೋಗುತ್ತಿದ್ದು ಭಕ್ತಾಧಿಗಳು ಶ್ರದ್ಧೆ, ನಿಷ್ಠೆಯಿಂದ ಪಾದಯಾತ್ರೆ ಮಾಡಿ ಕೊಟ್ಟೂರೇಶ್ವರನ ದರ್ಶನ ಪಡೆದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿವೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಮನುಷ್ಯನ ಶರೀರದಲ್ಲಿನ ಕಾಮ, ಕ್ರೋಧ, ಮದ, ಮತ್ಸರಗಳ ತೊಡೆದು ಹಾಕಿ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಂಬ ಸದ್ಗುಣಗಳ ಮೈಗೂಡಿಸಿಕೊಳ್ಳಲು ಪಾದಯಾತ್ರೆ ಒಂದು ಮಾರ್ಗವಾಗಿದ್ದು ಬೇಡಿದ್ದು ಕರುಣಿಸುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಮಹಾ ರಥೋತ್ಸವಕ್ಕೆ ಸ್ವಯಂ ಪ್ರೇರಿತರಾಗಿ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಹೋಗುತ್ತೀರುವುದು ದೇವರ ಮೇಲಿರುವ ಭಕ್ತಿ-ಭಾವಗಳ ತೋರಿಸುತ್ತಿದೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.

ಮಾ.4ರಂದು ನಡೆಯಲಿರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಪಟ್ಟಣದ ಗಣಪತಿ ವೃತ್ತದಲ್ಲಿನ ಶ್ರೀ ವಿಠಲ ರುಕ್ಕುಮ್ಮಾಯಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ ಶ್ರೀಗಳು ಕಳೆದ 25 ವರ್ಷದಿಂದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಚನ್ನಗಿರಿ ತಾಲೂಕಿನಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಹೋಗುತ್ತಿದ್ದು ಭಕ್ತಾಧಿಗಳು ಶ್ರದ್ಧೆ, ನಿಷ್ಠೆಯಿಂದ ಪಾದಯಾತ್ರೆ ಮಾಡಿ ಕೊಟ್ಟೂರೇಶ್ವರನ ದರ್ಶನ ಪಡೆದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿವೆ ಎಂದರು.

ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಮಾತನಾಡಿ ಜಾತಿ, ಧರ್ಮದ ತಾರತಮ್ಯಗಳಿಲ್ಲದೆ ಎಲ್ಲಾ ವರ್ಗದ ಜನರು ಸೇರಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ನಡೆಸುತ್ತಿದ್ದು ದಲಿತರ ಮನೆಯ ಪ್ರಸಾದ ಬಂದ ನಂತರವೇ ಕೊಟ್ಟೂರೇಶ್ವರನ ರಥೋತ್ಸವ ಮುಂದೆ ಸಾಗುವುದು ಇಂತಹ ಹಲವಾರು ಪವಾಡಗಳಿಗೆ ಸಾಕ್ಷಿಯಾದ ಗುರು ಕೊಟ್ಟೂರೇಶ್ವರರ ರಥೋತ್ಸವದಲ್ಲಿ ಪಾದಯಾತ್ರೆಯ ಮೂಲಕ ಹೋಗುವ ಅವಕಾಶ ನಿಮಗೆ ದೊರೆತಿರುವುದು ನಿಮ್ಮ ಪೂರ್ವಜನ್ಮದ ಪುಣ್ಯ ಎಂದರು.

ಸಮಾರಂಭದ ಉದ್ಘಾಟನೆಯ ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕೋರಿ ಬಸವರಾಜ್ ನೆರವೇರಿಸಿದರು. ಶ್ರೀ ಕೊಟ್ಟೂರೇಶ್ವರರ ಪವಾಡಗಳ ಕುರಿತಂತೆ ಶಿಕ್ಷಕ ಕಾಕನೂರು ಎಂ.ಬಿ.ನಾಗರಾಜ್ ಉಪನ್ಯಾಸ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್, ಚ.ಮ.ಗುರುಸಿದ್ದಯ್ಯ, ವೀರ ಶೈವ ಸಮಾಜದ ಮಾಜಿ ಅಧ್ಯಕ್ಷ ರಾಜಶೇಖರಯ್ಯ ಮಠದ್, ಸಾಗರದ ಶಿವಲಿಂಗಪ್ಪ, ಜ್ಯೋತಿ ಕೊಟ್ರೇಶ್ ಕೋರಿ, ಭಾರತಿ ಪ್ರಸಾದ್, ಕಿರಣ್ ಕೋರಿ ಪ್ರಸಾದ್, ಕವಿತಾ, ಬೂದಿ ಸ್ವಾಮಿ ಹಿರೇಮಠ್, ಕಮಲಾ ಸೇರಿ ಮುಂತಾದರಿದ್ದರು.