ಸಾರಾಂಶ
ಹಿಂದೂಗಳ ಮೇಲೆ ಹಾಗೂ ಗಣೇಶ ವಿಗ್ರಹದ ಮೇಲೆ ದಾಳಿ ಮಾಡಿದ್ದಲ್ಲದೇ ಹಿಂದೂ ಅಂಗಡಿ ಮುಗ್ಗಟ್ಟಿನ ಮೇಲೆ ದಾಳಿ
ಕನ್ನಡಪ್ರಭ ವಾರ್ತೆ ಮೈಸೂರು
ನಾಗಮಂಗಲದಲ್ಲಿ ಗಣೇಶನ ವಿಸರ್ಜನೆಯಲ್ಲಿ ಕೋಮುಗಲಭೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಂಘದವರು ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಮಾತನಾಡಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಗಣೇಶ ವಿಸರ್ಜನೆ ವೇಳೆ ಬೇರೆ ಧರ್ಮದವರು ವ್ಯವಸ್ಥಿತ ಪಿತೂರಿ ಮಾಡಿ, ಹಿಂದೂಗಳ ಮೇಲೆ ಹಾಗೂ ಗಣೇಶ ವಿಗ್ರಹದ ಮೇಲೆ ದಾಳಿ ಮಾಡಿದ್ದಲ್ಲದೇ ಹಿಂದೂ ಅಂಗಡಿ ಮುಗ್ಗಟ್ಟಿನ ಮೇಲೆ ದಾಳಿ ಮಾಡಿ, ಅವರ ಜೀವನೋಪಾಯಕ್ಕಾಗಿ ಇರುವ ಅಂಗಡಿ ಮುಗ್ಗಟ್ಟಿಗೆ ಬೆಂಕಿ ಹಚ್ಚಿರುವುದು ಸರಿಯಲ್ಲ ಎಂದು ಖಂಡಿಸಿದರು.
ಇಂತಹ ಕೃತ್ಯ ಮಾಡುವವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಶಿಕ್ಷೆ ನೀಡಿದ್ದಲ್ಲಿ ಮುಂದೆ ಯಾರೂ ಇಂತಹ ನೀಚ ಕೃತ್ಯಕ್ಕೆ ಕೈಹಾಕುವ ಕೆಲಸ ಮಾಡಬಾರದಾಗಿ ನೋಡಿಕೊಳ್ಳಬೇಕಾಗುತ್ತದೆ. ಬಹುಸಂಖ್ಯಾತರಾಗಿರುವ ಹಾಗೂ ಶಾಂತಿಯುತರಾಗಿರುವ ಹಿಂದೂಗಳಿಗೆ ಈ ರೀತಿ ಕೆಣಕುವ ಕೆಲಸ ಮಾಡದಂತೆ ಇಂತಹ ಕೃತ್ಯ ಮಾಡುವವರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ವಿಭಾಗ ಸಂಚಾಲಕಿ ಸವಿತಾ ಘಾಟ್ಕೆ, ಮುಖಂಡರಾದ ಅಂಬಿಕಾ ಜೀವನ್ ಮಿತ್ರ, ಜನಾರ್ಧನ್, ಗಿರಿಧರ್, ಮುರಳಿ, ಲೋಹಿತ್, ಕೃಷ್ಣಮೂರ್ತಿ, ಶಿವು, ರಾಣಿ, ಚೇತನ್ ಮಂಜುನಾಥ್, ಭಾಗ್ಯ, ಬೆರುಮಲ್ ರಾಥೋಡ್, ಕಾಂತಿಲಾಲ್ ಗುಲೆಚ, ದಲ್ಲಿಚಂದ್ ಶ್ರೀಮಾಲ್, ರಾಜೀವ್ ಕುಮಾರ್, ಲಾಲಾರಂ ಪುರೋಹಿತ್, ಮದನ್ ಲಾಲ್ ಪುರೋಹಿತ್ ಮೊದಲಾದವರು ಇದ್ದರು.