ಸಾರಾಂಶ
ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.
ಶಿವಮೊಗ್ಗ: ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಹಯೋಗದಲ್ಲಿ ಬುಧವಾರ ನಗರದ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯುತ್ಸ ಉದ್ಘಾಟಿಸಿ ಮಾತನಾಡಿ, ಭರತ ಖಂಡವು ಧಾರ್ಮಿಕ ಹಾಗೂ ಜನ ಜೀವನ ಸಂಸ್ಕೃತಿಯಿಂದ ನಡೆದು ಬಂದಿದೆ. ಇಲ್ಲಿ ಉತ್ತಮ ಗುರು ಪಡೆದರೆ ಮಾತ್ರ ಉತ್ತಮ ಸಂಸ್ಕೃತಿಯನ್ನು ಪಡೆಯಲು ಸಾಧ್ಯ. ಇಂತಹ ಗುರುವಿನ ಸಂಸ್ಕೃತಿಯನ್ನು ವಿಶ್ವಕರ್ಮ ಸಮಾಜ ಒಳಗೊಂಡಿದ್ದು, ಈ ಸಮಾಜದಲ್ಲಿ ಹುಟ್ಟಿದ ನೀವೆಲ್ಲ ಭಾಗ್ಯವಂತರು ಎಂದರು.ಚಿತ್ರದುರ್ಗ ರಾಷ್ಟ್ರೀಯ ವಿಶ್ವಕರ್ಮ ವಂಶಿ ಸೇನೆಯ ಜಿಲ್ಲಾಧ್ಯಕ್ಷೆ ಪಿ.ಜಿ.ಅನಿತಲಕ್ಷ್ಮಿ ಆಚಾರ್ಯ ಉಪನ್ಯಾಸ ನೀಡಿ, ನಮ್ಮ ಸಮುದಾಯ ಅಭಿವೃದ್ಧಿ ಆಗಬೇಕಾದರೆ ನಮ್ಮನ್ನು ನಾವು ಕಲೆಗೆ ಒಳಪಡಿಸಿಕೊಳ್ಳಬೇಕು. ಅದನ್ನು ಉಳಿಸುವ ಕೆಲಸ ಮಾಡಬೇಕು. ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು, ತಿದ್ದಿಕೊಳ್ಳಬೇಕು. ಮೂಢನಂಭಿಕೆಯಿಂದ ಆಚೆ ಬರಬೇಕು. ಹಿಂದೂ ಮುಸ್ಲಿಂ ಒಳಗೊಂಡಂತಹ ಭಾವೈಕ್ಯ ಮಂತ್ರ ನಮ್ಮ ಸಮಾಜದಲ್ಲಿದೆ. ಇದನ್ನು ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ರಮೇಶ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಗೂ ಸಮಾಜ ಮುಖಂಡರಿದ್ದರು.